
ಔರಾದ್: ನಿತ್ಯ ಶಾಲಾ ಕಾಲೇಜುಗಳಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆ ಇಲ್ಲಿನ ಬಸ್ ಡಿಪೋಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಎಬಿವಿಪಿ ಕಾರ್ಯಕರ್ತರು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಬೆಳಿಗ್ಗೆ 6 ಗಂಟೆಗೆ ಕೊರೆಯುವ ಚಳಿಯಲ್ಲೇ ಬಸ್ ಡಿಪೋಗೆ ಬೀಗ ಹಾಕಿ ಧರಣಿಗೆ ಕುಳಿತು ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಎಬಿವಿಪಿ ಮುಖಂಡ ಅಶೋಕ ಶೆಂಬೆಳ್ಳಿ, ‘ಔರಾದ್ ತಾಲ್ಲೂಕಿನ ನಾಗರಿಕರಿಗೆ ಸಮರ್ಪಕ ಸಾರಿಗೆ ಸೇವೆ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತು ನಿಯಮನುಸಾರ ಬಸ್ ಓಡಿಸದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಮಾಡುತ್ತಿದ್ದಾರೆ. ಇದರಿಂದ ಅನೇಕ ವಿದ್ಯಾರ್ಥಿಗಳು ನಿತ್ಯದ ಪಾಠ ಪ್ರವಚನದಿಂದ ವಂಚಿತರಾಗಿ ಅವರ ಭವಿಷ್ಯ ಹಾಳಾಗುತ್ತಿದೆ’ ಎಂದು ಆಕ್ರೋಶ ಹೊರ ಹಾಕಿದರು.
‘ಇಲ್ಲಿಯ ಚಾಲಕ ಹಾಗೂ ನಿರ್ವಾಹಕರ ಮೇಲೆ ನಿಯಂತ್ರಣವಿಲ್ಲವಾಗಿದೆ. ಪ್ರಯಾಣಿಕರು ಇಲ್ಲದಾಗ ಖಾಲಿ ಬಸ್ ಓಡಿಸುತ್ತಾರೆ. ಪ್ರಯಾಣಿಕರಿದ್ದ ವೇಳೆಯಲ್ಲಿ ಬಸ್ ಓಡಿಸುತ್ತಿಲ್ಲ. ಈ ವಿಷಯ ಗೊತ್ತಿದ್ದರೂ ಮೇಲಾಧಿಕಾರಿಗಳು ಮೌನ ವಹಿಸಿ ಇಲಾಖೆಗೆ ಆರ್ಥಿಕ ನಷ್ಟು ಉಂಟು ಮಾಡುವುದರ ಜತೆಗೆ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆಯಿಂದ ವಂಚಿಸುತ್ತಿದ್ದಾರೆ’ ಕಿಡಿ ಕಾರಿದರು.
ವಿದ್ಯಾರ್ಥಿ ಮುಖಂಡ ಶಿವಶರಣ ಚಾಂಬೋಳೆ ‘ಇಲ್ಲಿಯ ಸಾರಿಗೆ ಸಂಸ್ಥೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಬಸ್ ಸೇವೆಯಿಂದ ವಂಚಿಸುತ್ತಿದ್ದಾರೆ. ಹಣ ಗಳಿಸಲು ವೇತದೂತ ಬಸ್ ಜಾಸ್ತಿ ಮಾಡಿ ಸಾಮಾನ್ಯ ಬಸ್ ಓಡಾಟ ಕಡಿಮೆ ಮಾಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ’ ಎಂದು ತಿಳಿಸಿದರು.
ಪಿಎಸ್ಐ ವಸೀಂ ಪಟೇಲ್, ರಾಜಕುಮಾರ ನಾಯಕ, ಮಂಜುನಾಥ, ಅಂಬಾದಾಸ ನೇಳಗೆ, ಮಲ್ಲಿಕಾರ್ಜುನ ಟೇಕರಾಜ, ಅನಿಲ ಮೇತ್ರೆ, ಮಹಾದೇವ ಸಿಂಧೆ, ಶ್ರೀಕಾಂತ ಯಡವೆ, ನಿತಿನ್ ಮೂಲಗೆ, ಪ್ರಶಾಂತ ಮೇತ್ರೆ, ಮಾರುತಿ ಉದಗಿರೆ, ಪ್ರೇಮ, ಅಜಯ ಸೇರಿದಂತೆ ಅನೇಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಾರಿಗೆ ಸಂಸ್ಥೆಯಲ್ಲಿನ ವ್ಯವಸ್ಥೆ ಸರಿಪಡಿಸಿ ಪ್ರಯಾಣಿಕರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆರಾಜೇಂದ್ರ ಜಾಧವ್ ವಿಭಾಗೀಯ ನಿಯಂತ್ರಣಾಧಿಕಾರಿ ಬೀದರ್
ಪ್ರಯಾಣಿಕರಿಲ್ಲದ ವೇಳೆ (ಮಧ್ಯಾಹ್ನ) ಒಂದರ ಹಿಂದೆ ಮತ್ತೊಂದು ಖಾಲಿ ಬಸ್ ಓಡಿಸಲಾಗುತ್ತಿದೆ. ಸಂಜೆ ವೇಳೆ ಪ್ರಯಾಣಿಕರಿದ್ದರೂ ಬಸ್ ಇರುವುದಿಲ್ಲ. ಇದನ್ನು ತಡೆಯಬೇಕುಅಶೋಕ ಶೆಂಬೆಳ್ಳಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.