
ಔರಾದ್: ಮಾಸಾಶನ ಸ್ಥಗಿತವಾದ ಹಿನ್ನೆಲೆಯಲ್ಲಿ ಅನಾಥ ಮಹಿಳೆಯೊಬ್ಬರು ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳ ಎದುರು ಕಣ್ಣೀರಿಟ್ಟಿದ್ದಾರೆ.
ತಾಲ್ಲೂಕಿನ ಸಂತಪೂರನಲ್ಲಿ ಈಚೆಗೆ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ಉಮಾದೇವಿ ಸುಭಾಷ ಎನ್ನುವ ವಿಧವೆ ತಹಶೀಲ್ದಾರ್ ಮಹೇಶ ಪಾಟೀಲ ಎದುರು ಕಣ್ಣೀರಿಟ್ಟು, ‘ನನಗೆ ಮಾಸಾಶನ ಬರುತ್ತಿಲ್ಲ. ಉಣ್ಣಲು ಏನು ಇಲ್ಲ. ಅಲ್ಲಿ ಇಲ್ಲಿ ಬೇಡಿಕೊಂಡು ತ್ತಿನ್ನುತ್ತಿದ್ದೇನೆ’ ಎಂದು ಅಳಲು ತೋಡಿಕೊಂಡರು.
ಉಮಾದೇವಿ ಅವರ ಮೂವರು ಹೆಣ್ಣು ಮಕ್ಕಳ ಮದುವೆಯಾಗಿದ್ದು ಅವರು ಗಂಡನ ಮನೆಯಲ್ಲಿದ್ದಾರೆ. ಪತಿ ಮೃತಟ್ಟಿದ್ದರಿಂದ ಕೆಲಕಾಲ ವಡಗಾಂವ್ ಅನಾಥಶ್ರಮದಲ್ಲಿ ಇದ್ದರು. ಮತ್ತೆ ವಾಪಸ್ ಬಂದಿದ್ದಾರೆ. ಮಾಸಾಶನ ಬರುವುದಿಲ್ಲ, ಪಡಿತರ ಚೀಟಿಯೂ ಇಲ್ಲ. ಈ ಕುರಿತು ನಾಡ ಕಚೇರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಸಂತಪೂರನ ಗಣಪತಿ ದೇಶಪಾಂಡೆ ತಿಳಿಸಿದ್ದಾರೆ.
ಈ ಮಹಿಳೆಗೆ ಮಾಸಾಶನ ಸ್ಥಗಿತವಾಗಿರುವುದು ನನಗೆ ಗ್ರಾಮ ಸಂಚಾರದಲ್ಲಿ ಗೊತ್ತಾಗಿದೆ. ಸಂಬಂಧಿತರನ್ನು ಕರೆಸಿ ಇವರಿಗೆ ಆದಷ್ಟು ಬೇಗ ಮಾಸಾಶನ ಹಾಗೂ ಪಡಿತರ ಚೀಟಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್ ಮಹೇಶ ಪಾಟೀಲ ಪ್ರಜಾವಾಣಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.