ADVERTISEMENT

7ರಂದು ಬಸವಕಲ್ಯಾಣದಲ್ಲಿ ಜಾಗೃತಿ ಕಾರ್ಯಕ್ರಮ

ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣಪತ್ರ ನೀಡಲು ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 15:12 IST
Last Updated 1 ಫೆಬ್ರುವರಿ 2021, 15:12 IST
ಬಿ.ಡಿ.ಹಿರೇಮಠ
ಬಿ.ಡಿ.ಹಿರೇಮಠ   

ಬೀದರ್: ‘ಬೇಡ ಜಂಗಮರು ಕಾನೂನು ಬದ್ಧವಾಗಿಯೇ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆಯಲು ಅವಕಾಶ ಇದೆ. ಈ ಕುರಿತು ಜಾಗೃತಿ ಮೂಡಿಸಲು ಬಸವಕಲ್ಯಾಣದಲ್ಲಿ ಫೆ.7ರಂದು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, 20 ಸಾವಿರ ಜನರು ಸೇರಲಿದ್ದಾರೆ’ ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ.ಹಿರೇಮಠ ತಿಳಿಸಿದರು.

‘ಸಮುದಾಯದ ಹಕ್ಕು ಪಡೆಯಲು ರಾಜಕೀಯ ರಹಿತವಾಗಿ ಹೋರಾಟ ನಡೆಸಲಾಗುವುದು. ಮೊದಲ ಹಂತದಲ್ಲಿ ಬಸವಕಲ್ಯಾಣದಲ್ಲೇ ಹೋರಾಟಕ್ಕೆ ಚಾಲನೆ ನೀಡಲಾಗುವುದು. ಫೆ.19ರಂದು ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ಸಮಾವೇಶ ನಡೆಸಿ ಬೇಡ ಜಂಗಮರ ಹಕ್ಕೊತ್ತಾಯ ಮಾಡಲಾಗುವುದು’ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ಹೇಳಿದರು.

‘1921ರಲ್ಲಿ ನಿಜಾಮರ ಆಡಳಿತದಲ್ಲಿ ಡಿಪ್ರೆಸ್ಡ್‌ ಕ್ಲಾಸ್‌ ಪಟ್ಟಿಯಲ್ಲಿ ಜಂಗಮರನ್ನು ಸೇರಿಸಲಾಗಿದೆ. 1935ರಲ್ಲಿ ಭಿಕ್ಷಾವೃತ್ತಿಯಲ್ಲಿ ತೊಡಗಿದ್ದವರನ್ನು ಮಾತ್ರ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿದೆ. 1977ರಲ್ಲಿ ರಾಜ್ಯ ಸರ್ಕಾರ ಧಾರ್ಮಿಕ ಭಿಕ್ಷುಕರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಿದೆ’ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ 35 ಲಕ್ಷ ಬೇಡ ಜಂಗಮರು ಇದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಬೇಡ ಜಂಗಮರ ಸಂಖ್ಯೆ 17 ಸಾವಿರ ಇದೆ. ನಮ್ಮ ಸಮುದಾಯದವರಿಗೆ ವಿಳಂಬ ಮಾಡದೆ ಜಾತಿ ಪ್ರಮಾಣಪತ್ರ ನೀಡಬೇಕು. ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಸವರಾಜ ಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಬೇಕು. ಬೇಡ ಜಂಗಮ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟರ ಪಟ್ಟಿಯಲ್ಲಿ 101 ಜಾತಿಗಳಿವೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಬಜೆಟ್‌ ನೀಡಬೇಕು ಎಂದು ಒತ್ತಾಯಿಸಿದರು.

ರವಿ ಸ್ವಾಮಿ, ಸಿದ್ದರಾಮಯ್ಯ ಸ್ವಾಮಿ, ಬಸವರಾಜ ಸ್ವಾಮಿ, ಮಹೇಶ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.