ADVERTISEMENT

ಭವಾನಿ ದರ್ಶನಕ್ಕೆ ಸಚಿವರ ಸೈಕಲ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 15:27 IST
Last Updated 20 ಅಕ್ಟೋಬರ್ 2018, 15:27 IST
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಬೀದರ್‌ನ ತಮ್ಮ ನಿವಾಸದಲ್ಲಿ ಸೈಕಲ್ ಅಭ್ಯಾಸ ನಡೆಸಿದರು
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಬೀದರ್‌ನ ತಮ್ಮ ನಿವಾಸದಲ್ಲಿ ಸೈಕಲ್ ಅಭ್ಯಾಸ ನಡೆಸಿದರು   

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಅಂಬಾ ಭವಾನಿ ದರ್ಶನಕ್ಕೆ ಮೂರನೇ ಬಾರಿಗೆ ತುಳಜಾಪುರಕ್ಕೆ ಸೈಕಲ್ ಯಾತ್ರೆ ಕೈಗೊಳ್ಳಲಿದ್ದಾರೆ.

ಭಾನುವಾರ (ಅ.21) ಬೆಳಿಗ್ಗೆ 8 ಗಂಟೆಗೆ ನಗರದಿಂದ ಸೈಕಲ್ ಯಾತ್ರೆ ಆರಂಭಿಸಲಿರುವ ಅವರು ಮೂರು ಹಗಲು, ಮೂರು ರಾತ್ರಿಗಳಲ್ಲಿ 180 ಕಿ.ಮೀ. ದೂರದ ತುಳಜಾಪುರವನ್ನು ತಲುಪಿ ನಾಲ್ಕನೇ ದಿನ ದೇವಿಯ ದರ್ಶನ ಪಡೆಯಲಿದ್ದಾರೆ.

2004 ಹಾಗೂ 2008 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಸಂದರ್ಭದಲ್ಲಿ ಅವರು ತುಳಜಾಪುರಕ್ಕೆ ಸೈಕಲ್ ಯಾತ್ರೆ ಕೈಗೊಂಡು ದೇವಿಗೆ ಭಕ್ತಿ ಸಮರ್ಪಣೆ ಮಾಡಿದ್ದರು. 2018ರ ಚುನಾವಣೆಯಲ್ಲಿ ಜಯ ಗಳಿಸಿದ ಪ್ರಯುಕ್ತ ಈಗ ಮೂರನೇ ಬಾರಿಗೆ ಶಕ್ತಿದೇವಿಯ ಸನ್ನಿಧಿಗೆ ತೆರಳುತ್ತಿದ್ದಾರೆ.

ADVERTISEMENT

‘ಸಚಿವರು ಬೆಳಿಗ್ಗೆ 8 ಗಂಟೆಗೆ ನಗರದ ತಮ್ಮ ನಿವಾಸದಿಂದ ಸೈಕಲ್ ಮೇಲೆ ರಾಮಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುವರು. ಅಲ್ಲಿಂದ ತಮ್ಮ ಸ್ವಗ್ರಾಮ ಬೀದರ್ ತಾಲ್ಲೂಕಿನ ಕಾಶೆಂಪೂರಕ್ಕೆ ತೆರಳಿ ತಂದೆ-ತಾಯಿಯ ಸಮಾಧಿಗೆ ಪೂಜೆ ಸಲ್ಲಿಸುವರು. ಬಳಿಕ ಮನ್ನಾಎಖ್ಖೆಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣ ಬೆಳೆಸುವರು. ಬಸವಕಲ್ಯಾಣ ನಗರದ ಆಚೆ ಹೋಟೆಲ್‌ನಲ್ಲಿ ರಾತ್ರಿ ವಾಸ್ತವ್ಯ ಮಾಡುವರು’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ತಿಳಿಸಿದ್ದಾರೆ.

‘ಅಕ್ಟೋಬರ್ 22 ರಂದು ಮಹಾರಾಷ್ಟ್ರದಲ್ಲಿ ತಾವು ಪ್ರತಿ ವರ್ಷ ಅನ್ನ ದಾಸೋಹ ಏರ್ಪಡಿಸುವ ಸ್ಥಳದಲ್ಲಿ ವಾಸ್ತವ್ಯ ಮಾಡುವರು. ಅಕ್ಟೋಬರ್ 23 ರಂದು ರಾತ್ರಿ ತುಳಜಾಪುರವನ್ನು ತಲುಪುವರು. ಅಕ್ಟೋಬರ್ 24 ರಂದು ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸುವರು’ ಎಂದು ಹೇಳಿದ್ದಾರೆ.

ಕಾಶೆಂಪೂರ ಅವರ ಸೈಕಲ್ ಯಾತ್ರೆಗೆ ರಮೇಶ ಪಾಟೀಲ ಸೋಲಪುರ, ಮುಖಂಡರಾದ ರಾಜು ಚಿಂತಾಮಣಿ, ನಬಿ ಖುರೇಶಿ, ಸುದರ್ಶನ ಸುಂದರರಾಜ್ ಸೇರಿದಂತೆ ನೂರಾರು ಜನ ಸಾಥ್ ನೀಡಲಿದ್ದಾರೆ. ಕೆಲವರು ಸೈಕಲ್, ಇನ್ನು ಕೆಲವರು ದ್ವಿಚಕ್ರ ವಾಹನ ಹಾಗೂ ಕಾರ್‌ನಲ್ಲಿ ತುಳಜಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.