ಬಸವಕಲ್ಯಾಣ: ‘ಗುರು ಬಸವಣ್ಣನವರು ವಚನ ಸಾಹಿತ್ಯ ರಚಿಸಿ ಜನಸಾಮಾನ್ಯರಲ್ಲಿ ಅರಿವಿನ ಜ್ಯೋತಿ ಹೊತ್ತಿಸಿದರು’ ಎಂದು ಬಸವತತ್ವ ಪ್ರಚಾರಕ ಡಾ.ಬಸವರಾಜ ಪಂಡಿತ್ ಹೇಳಿದ್ದಾರೆ.
ನಗರದ ಶಿವಪುರ ರಸ್ತೆಯ ಅನ್ನಪೂರ್ಣ ಚಂದ್ರಕಾಂತ ಭೂರೆ ಅವರ ನಿವಾಸದಲ್ಲಿ ಸೋಮವಾರ ಆಯೋಜಿಸಿದ್ದ ಅರಿವಿನ ಜ್ಯೋತಿ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಅವರು ಮಾತನಾಡಿದರು.
‘ಜಗತ್ತಿನಲ್ಲಿ ಮೂಢನಂಬಿಕೆ, ಕಂದಾಚಾರ, ಜಾತಿಯತೆಯ ಕತ್ತಲು ತುಂಬಿ ತುಳುಕುತ್ತಿತ್ತು. ಆಗ ಕಾರ್ತಿಕದ ಕತ್ತಲೆಯಲ್ಲಿ ಆಕಾಶ ದೀಪವಾಗಿ ಬಂದಂತೆ ಗುರು ಬಸವಣ್ಣನವರು ಅವತರಿಸಿ ಬಂದು ಜನಜಾಗೃತಿಯ ಕಾರ್ಯ ಕೈಗೊಂಡರು. ಸಮಾನತೆ, ವೈಜ್ಞಾನಿಕತೆ ಮತ್ತು ವೈಚಾರಿಕತೆಯ ಆಧಾರದಲ್ಲಿ ನವಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು’ ಎಂದರು.
ತಹಶೀಲ್ದಾರ್ ಶಿವನಂದ ಮೇತ್ರೆ ಮಾತನಾಡಿ,‘ಬಸ ವಣ್ಣನವರ ತತ್ವದ ಹಾಗೂ ವಚನಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಬಸವರಾಜ ಪಂಡಿತ್ ಅವರು ಇಂಥ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ ಬಸವತತ್ವದ ಬೆಳಕನ್ನು ಪಸರಿಸುತ್ತಿದ್ದಾರೆ’ ಎಂದರು.
ನಿವೃತ್ತ ಶಿಕ್ಷಕ ಚನ್ನಬಸಪ್ಪ ಪತಂಗೆ, ಶಿವಪುತ್ರಪ್ಪ ಕಣಜೆ, ಶಿವಕುಮಾರ ಮಾಶೆಟ್ಟೆ, ಮಹಾದೇವ, ಡಾ. ಮಹೇಶ ಪಾಟೀಲ, ಜಯಪ್ರಕಾಶ ಸದಾನಂದೆ, ಶಿವಕುಮಾರ ಜಡಗೆ ಮಾತನಾಡಿದರು. ಶಂಕರಣ್ಣ ಕೊಳಕೂರ, ಆನಂದ ಪಾಟೀಲ, ವೀರಶೆಟ್ಟಿ, ಶ್ರೀದೇವಿ ಕಾಕನಾಳೆ, ಸುಮಿತ್ರಾ ದಾವಣಗಾಂವೆ, ಸುಭಾಷ ಪತಂಗೆ, ರಮೇಶ ಪತಂಗೆ, ಶಿವಕುಮಾರ ಮಾಶೆಟ್ಟೆ, ಬಾಬುರಾವ ರಾಜೋಳೆ, ಗುರುನಾಥಪ್ಪ ಹತ್ತೆ, ಸಂಗಮೇಶ ಕಣಜೆ, ವಿಜಯಲಕ್ಷ್ಮೀ ರಾಜೋಳೆ, ಕಸ್ತೂರಿಬಾಯಿ ಭೂಶೆಟ್ಟೆ, ಶಶಿಕಲಾ ನಾಗೂರೆ, ಭಾಗ್ಯವತಿ ಚಿಮ್ಮಾ ಇದ್ದರು.
ಮಂದಾಕಿನಿ ಕಾದೆಪುರೆ ವಚನಸಂಗೀತ ಪ್ರಸ್ತುತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.