ADVERTISEMENT

ಜಗದ ಕಲ್ಯಾಣ ಬಯಸಿದ ಬಸವಾದಿ ಶರಣರು

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬ್ಯಾಕೋಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 8:54 IST
Last Updated 13 ಫೆಬ್ರುವರಿ 2020, 8:54 IST
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ 113ನೇ ತಿಂಗಳ ಅನುಭವ ಮಂಟಪದ ಕಾರ್ಯಕ್ರಮದಲ್ಲಿ ಹೆಚ್ಚುವರಿ ‍ಪೊಲೀಸ್‌ ವರಿಷ್ಠಾಧಿಕಾರಿ ಬ್ಯಾಕೋಡ ಮಾತನಾಡಿದರು. ಗುರುಬಸವ ಪಟ್ಟದ್ದೇವರು, ಎಸ್‌ಬಿ.ಬಿರಾದಾರ, ಮಹೇಶ ಘಾಳೆ ಇದ್ದರು
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ 113ನೇ ತಿಂಗಳ ಅನುಭವ ಮಂಟಪದ ಕಾರ್ಯಕ್ರಮದಲ್ಲಿ ಹೆಚ್ಚುವರಿ ‍ಪೊಲೀಸ್‌ ವರಿಷ್ಠಾಧಿಕಾರಿ ಬ್ಯಾಕೋಡ ಮಾತನಾಡಿದರು. ಗುರುಬಸವ ಪಟ್ಟದ್ದೇವರು, ಎಸ್‌ಬಿ.ಬಿರಾದಾರ, ಮಹೇಶ ಘಾಳೆ ಇದ್ದರು   

ಬೀದರ್: ‘ಬಸವಾದಿ ಶರಣರು ಜಾತಿ, ಮತ, ಮೇಲೂ, ಕೀಳು ಎನ್ನುವ ಭಾವನೆ ತೋರದೆ ಎಲ್ಲರೂ ಒಂದೇ ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಜಗದ ಕಲ್ಯಾಣವೇ ಬಸವ ಧರ್ಮದ ಮೂಲ ಧ್ಯೇಯವಾಗಿತ್ತು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಹೇಳಿದರು.

ಇಲ್ಲಿಯ ವಿದ್ಯಾನಗರ ಕಾಲೊನಿಯ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಮಂಗಳವಾರ ಆಯೋಜಿಸಿದ್ದ 113ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಡಾ.ಚನ್ನಬಸವ ಪಟ್ಟದ್ದೇವರು ಮತ್ತು ಬಸವಲಿಂಗ ಪಟ್ಟದ್ದೇವರು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಬಡ, ದಲಿತರ, ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಜ್ಞಾನ ದಾಸೋಹ ಮಾಡುತ್ತಿರುವುದು ಶ್ಲಾಘನೀಯ’ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

ಸಾಹಿತಿ ಜಯಶ್ರೀ ಸುಕಾಲೆ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಅನ್ಯಾಯ, ಅತ್ಯಾಚಾರ, ಸುಲಿಗೆ, ಕೊಲೆ, ಶೋಷಣೆ, ದೌರ್ಜನ್ಯದಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದು ನಾವು ನೋಡುತ್ತಿದ್ದೇವೆ. ಯುವಕರಿಗೆ ಉತ್ತಮ ಸಂಸ್ಕಾರದ ಇಲ್ಲದಿರುವ ಕಾರಣ ಇಂತಹ ಅನಾಹುತಗಳ ನಡೆಯುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಯುವಕರು ಬಸವಾದಿ ಶರಣರ ವಚನಗಳ ಅಧ್ಯಯನ ಮಾಡಬೇಕು. ಅಧ್ಯಯನದಿಂದ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಯುತ್ತದೆ. ಕಂದಾಚಾರ, ಮೌಢ್ಯಾಚರಣೆಯಿಂದ ಹೊರಬರಬೇಕು. ಪ್ರತಿಯೊಬ್ಬರು ಬಸವಾದಿ ಶರಣರು ನೀಡಿದ ಇಷ್ಟಲಿಂಗದ ಆರಾಧಕರಾಗಿ ಜೀವನ ವನ್ನು ಸುಂದರ ಗೊಳಿಸಿಕೊ ಳ್ಳಬೇಕು’ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ 12ನೇ ಶತಮಾನದ ಶರಣರು ಸತ್ಯ ಶುದ್ಧ ಕಾಯಕ ಮಾಡಿ ಮೇರು ವ್ಯಕ್ತಿತ್ವವನ್ನು ಹೊಂದಿದ್ದರು. ಹೀಗೆ ಪ್ರತಿಯೊಬ್ಬರು ಕಾಯಕದ ಮೂಲಕ ಅಂತರಂಗ ಅನುಭಾವದ ಅರಿವನ್ನು ಪಡೆದುಕೊಂಡು ಪರಮ ಸುಖವನ್ನು ಪಡೆಯಬೇಕು’ ಎಂದು ನುಡಿದರು.

ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಮಹೇಶ ಘಾಳೆ ಬಣದ ಥಾಮಸ್‌ ಕಟ್ಟಿಮನಿ, ಪರಮೇಶ್ವರ ರಾಂಪೂರೆ, ರಾಜೇಂದ್ರ ಬಿರಾದಾರ, ವಿಠಲ ರಾಠೋಡ್, ಕವಿತಾ, ಮಹೇಶ ಘಾಳೆ, ರಾಜಕುಮಾರ ರಟಕಲೆ, ಶಂಕರ ಪಸರ್ಗಿ, ಅಶೋಕ ರೆಡ್ಡಿ, ದಾಸೋಹಿಗಳಾದ ಲಕ್ಷ್ಮಿಬಾಯಿ ಪಂಡಲೀಕರಾವ್ ಬಿರಾದಾರ ಹಾಗೂ ಸೇವೆಯಿಂದ ನಿವೃತ್ತಿ ಹೊಂದಿದ ಅಶೋಕ ಗೊರ್ಟೆಕರ ಅವರನ್ನು ಸನ್ಮಾನಿಸಲಾಯಿತು.

ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ.ಎಸ್.ಬಿ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಚನಶ್ರೀ ಚನ್ನಬಸವಪ್ಪ ನೌಬಾದೆ ವಚನ ಸಂಗೀತ ನಡೆಸಿಕೊಟ್ಟರು. ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಸಂಗ್ರಾಮಪ್ಪ ಬಿರಾದರ, ಗುರುನಾಥ ಬಿರಾದಾರ ನೀಲಕಂಠ ಬಿರಾದಾರ, ರಘುಶಂಖ ಭಾತಂಬ್ರಾ, ವೈಜಿನಾಥ ಬಿರಾದಾರ, ಕಾಶಿನಾಥ ಸೂರ್ಯವಂಶಿ, ಸಿದ್ದು ಕೋರೆ ಇದ್ದರು.

ಶ್ರೀಕಾಂತ ಬಿರಾದಾರ ಸ್ವಾಗತಿಸಿದರು. ಪ್ರೊ.ಉಮಾಕಾಂತ ಮೀಸೆ ನಿರೂಪಿಸಿದರು. ಶ್ರೀಕಾಂತ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.