
ಭಾಲ್ಕಿ: ‘ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು, ತಮ್ಮ ಇಡೀ ಬದುಕನ್ನು ಬಸವತತ್ವ ಪ್ರಚಾರ, ಪ್ರಸಾರಕ್ಕೆ ಮುಡಿಪಾಗಿಟ್ಟಿದ್ದಾರೆ’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಹೇಳಿದರು.
ತಾಲ್ಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಶಿವಶರಣ ಹರಳಯ್ಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೂಜ್ಯರು ಬಸವತತ್ವ ಪ್ರಚಾರಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರು ಕಟ್ಟಿದ ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಪಾಲನೆ ಪೋಷಣೆ ಜತೆಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲ್ಪಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸಿ ನಾಡಿಗೆ ಸಮರ್ಪಣೆ ಮಾಡುತ್ತಿರುವುದು ಹೆಮ್ಮೆ ತರಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಪೂಜ್ಯರು ತಮ್ಮದೆ ಭಕ್ತ ವಲಯ ಹೊಂದಿದ್ದಾರೆ. ಅವರ ಪ್ರವಚನದಿಂದ ಸಾವಿರಾರೂ ಜನರು ಪರಿವರ್ತನೆ ಆಗಿದ್ದಾರೆ’ ಎಂದು ತಿಳಿಸಿದರು.
ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಅಮೃತಪ್ಪ ಪಾಟೀಲ ಗುಡ್ಡೇವಾಡಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಎಂಬಿಬಿಎಸ್, ಎಂಡಿಯಲ್ಲಿ 3ನೇ ರ್ಯಾಂಕ್ ಪಡೆದ ಡಾ.ಮಹಾಲಕ್ಷ್ಮಿ ಡಿ.ಕೆ.ಸಿದ್ರಾಮ ಅವರನ್ನು ಪೂಜ್ಯರು ಸನ್ಮಾನಿಸಿದರು. ಬಸವರಾಜ ಕೆಂಗನಾಳ, ಜಿ.ಪಂ ಮಾಜಿ ಸದಸ್ಯ ಪೂಜಾ ಡಿ.ಕೆ. ಸಿದ್ರಾಮ, ಪತ್ರಕರ್ತ ಡಿ.ಕೆ. ಗಣಪತಿ, ಪ್ರಮುಖರಾದ ರಾಜಕುಮಾರ ಟಿಳೇಕಾರ, ಬಾಬುರಾವ ಸೋನಕಾಂಬಳೆ, ಶ್ರಾವಣ ಲಾಡವಂತೆ, ಉಮೇಶ ಬೊರಾಳೆ, ಉಮೇಶ ಹಮಿಲಪುರೆ, ಗೌತಮ ಜಾಧವ, ವಿಜಯಕುಮಾರ ಚೌದರಿ, ಅನಿಲ್ ಬಿದರಿ, ಮೋಹನರಾವ ಸೂರ್ಯವಂಶಿ ಸೇರಿದಂತೆ ಹಲವರು ಹಾಜರಿದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ ನಿರೂಪಿಸಿದರು. ಮಹೇಶ ಮಹಾರಾಜ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.