ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಉದ್ಯೋಗದ ಕಾಲಂನಲ್ಲಿ ‘ಕೃಷಿ ಮತ್ತು ಸಮಾಜ ಸೇವೆ’ ಎಂದು ನಮೂದಿಸಿದ್ದಾರೆ. ಇವರು ಹಾಗೂ ಇಬ್ಬರು ಪುತ್ರರು ಸೇರಿ ಒಟ್ಟಾರೆ ಆಸ್ತಿ ₹7.10 ಕೋಟಿ ಇದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಸವಕಲ್ಯಾಣದ ಆ್ಯಕ್ಸಿಸ್ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ₹50 ಸಾವಿರ, ಬೆಂಗಳೂರಿನ ಕೆನರಾ ಬ್ಯಾಂಕಿನಲ್ಲಿ ₹15 ಲಕ್ಷ, ಕೆನರಾ ಬ್ಯಾಂಕ್ ಇನ್ನೊಂದು ಖಾತೆಯಲ್ಲಿ ₹2.60 ಲಕ್ಷ ನಗದು ಇಟ್ಟಿದ್ದಾರೆ. ₹5 ಲಕ್ಷ ಮೊತ್ತವನ್ನು ಎಲ್ಐಸಿ ಯಲ್ಲಿ ಹೂಡಿಕೆ ಮಾಡಿದ್ದಾರೆ. ಕೆನರಾ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಇಂಡಿಯಾದ ಬೆಂಗಳೂರು ಶಾಖೆಗಳಲ್ಲಿ ಹಿರಿಯ ಪುತ್ರ ಗೌತಮ ಹೆಸರಲ್ಲಿ ₹6.50 ಲಕ್ಷ ಹಾಗೂ ಕಿರಿಯ ಪುತ್ರ ರಾಹುಲ್ ಹೆಸರಿನಲ್ಲಿ ₹70 ಸಾವಿರ ಇದೆ.
ಬೀದರ್ ತಾಲ್ಲೂಕಿನ ನಿಜಾಪುರ ಕೊಳಾರದಲ್ಲಿ 4 ಎಕರೆ 36 ಗುಂಟೆ ಕೃಷಿ ಜಮೀನು, ಗೋರನಳ್ಳಿಯಲ್ಲಿ ಗೌತಮ ಹೆಸರಲ್ಲಿ 2.38 ಎಕರೆ ಜಮೀನು ಹಾಗೂ ರಾಹುಲ್ ಹೆಸರಲ್ಲಿ ಬೀದರ್ ತಾಲ್ಲೂಕಿನ ಚಿಲ್ಲರ್ಗಿಯಲ್ಲಿ 2.10 ಎಕರೆ ಕೃಷಿ ಜಮೀನು ಇದೆ. ಇವುಗಳ ಮಾರುಕಟ್ಟೆ ಒಟ್ಟಾರೆ ಮೌಲ್ಯ ₹2.10 ಕೋಟಿ ಆಗಲಿದೆ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೀದರ್ನ ಕೆಎಚ್ಬಿ ಕಾಲೊನಿ, ಯಾದಗಿರಿಯಲ್ಲಿ 1200 ಅಡಿಯ ನಿವೇ ಶನಗಳು ಇವೆ. ಬೆಂಗಳೂರಲ್ಲಿ ಒಂದು ಮನೆಯೂ ಇದೆ. ಇವುಗಳ ಮಾರುಕಟ್ಟೆ ಮೌಲ್ಯ ₹3.80 ಕೋಟಿ ಆಗಲಿದೆ. ಕಳೆದ ವರ್ಷ ವಾರ್ಷಿಕ ಆದಾಯ ₹5,21,950 ಇತ್ತು. ಪ್ರಸಕ್ತ ವರ್ಷ ₹6,50,300 ಆದಾಯ ತೋರಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಇವರ ವಾರ್ಷಿಕ ಆದಾಯದಲ್ಲಿ ₹ 1.28 ಲಕ್ಷ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.