ಬಸವಕಲ್ಯಾಣ: ನಗರದ ಯುವಕರು ಭಾನುವಾರ ನಿರ್ಗತಿಕರಿಗೆ ಕ್ಷೌರ, ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸುವ ಮೂಲಕ ಅವರಿಗೆ ನೆರವಾಗಿದ್ದಾರೆ.
ಲೋಕೇಶ ಮೋಳಕೆರೆ, ಜ್ಞಾನೇಶ್ವರ ರಾಚಪ್ಪನೋರ್, ರಾಹುಲ ಶಾಶೆಟ್ಟೆ, ನಾಗೇಶ ಬಾವಗೆ, ಆಕಾಶ ಮುತ್ತೆ, ಪ್ರಶಾಂತ ಅಂಬಾಡೆ, ಶಿವಶಂಕರ ಕಾಮಣ್ಣ, ಪ್ರವೀಣ ಬಿರಾದಾರ, ಚೇತನ ಹೀರೋಳೆ ಹಾಗೂ ಅಂಬರೀಶ ಕೋರಾಳೆ ಅವರನ್ನೊಳಗೊಂಡ ಹತ್ತು ಜನ ಯುವಕರ ತಂಡವು ಎರಡು ವಾರಗಳಿಂದ ಅನಾಥರಿಗೆ ಸಂಜೆ ವೇಳೆ ಒಂದು ಹೊತ್ತಿನ ಊಟ ನೀಡುತ್ತಿದೆ. ಇದರಲ್ಲಿ ಕೆಲವರು ಕಾಲೇಜು ಶಿಕ್ಷಣ ಪೊರೈಸಿದ್ದರೆ, ಇನ್ನೂ ಕೆಲವರು ಸಣ್ಣಪುಟ್ಟ ಉದ್ಯೋಗದಲ್ಲಿದ್ದಾರೆ. ಇವರೆಲ್ಲ ಸ್ವಂತ ಹಣ ಸಂಗ್ರಹಿಸಿ ಅನಾಥರಿಗೆ ನಿತ್ಯ ದಾಸೋಹ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಅನಾಥರ ಹಾಗೂ ಮಾನಸಿಕ ಅಸ್ವಸ್ಥರ ಮೈಕೈ ಗಲೀಜು ಆಗಿರುವುದನ್ನು ಕಂಡು ಎಲ್ಲರೂ ಇಡೀ ದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ. ಮೂರು–ನಾಲ್ಕು ಜನ ಕೂಡಿ ಬೀದಿಯಲ್ಲಿನ ನಿರ್ಗತಿಕರಿಗೆ ಕ್ಷೌರ ಮಾಡಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿದರು.
‘ವೃದ್ಧರು, ಅಂಗವಿಕಲರು, ಮಾನಸಿಕ ಅಸ್ವಸ್ಥರು ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವುದಿಲ್ಲ. ಅವರಿಗೆ ಯಾರೂ ಊಟವೂ ಕೊಡುವುದಿಲ್ಲ. ಆದ್ದರಿಂದ ಅವರಿರುವ ಸ್ಥಳಕ್ಕೆ ಹೋಗಿ ಒಂದು ಹೊತ್ತಿನ ಊಟವಾದರೂ ಪೊರೈಸಬೇಕು ಎಂದು ನಿರ್ಧರಿಸಿದೆವು. ಅಡುಗೆ ತಯಾರಿಸಲು ಕೋಣೆಯೊಂದನ್ನು ಬಾಡಿಗೆಗೆ ಪಡೆದು ಕೆಲ ದಿನಗಳಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ' ಎಂದು ತಂಡದ ಲೋಕೇಶ ಮೋಳಕೆರೆ ಹಾಗೂ ಜ್ಞಾನೇಶ್ವರ ರಾಚಪ್ಪನೋರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.