ಬೀದರ್: ಪಠ್ಯಪುಸ್ತಕ ರಚನಾ ಸಮಿತಿಯು ಬದಲಾಯಿಸಿರುವ ಪಠ್ಯ ಕುರಿತು ಅನೇಕ ಆಕ್ಷೇಪಗಳಿವೆ. ಅದರಲ್ಲಿಯೂ ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ಇತಿಹಾಸ ತಿರುಚಿರುವುದು ಅಕ್ಷಮ್ಯ. ಅದು ಬಸವಾದಿ ಶರಣರಿಗೆ ಮತ್ತು ಲಿಂಗಾಯತ ಧರ್ಮಕ್ಕೆ ಎಸಗಿದ ಅಪಚಾರ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಖಂಡಿಸಿದ್ದಾರೆ.
9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1ರ ಪುಟ 27-28 ರಲ್ಲಿ ಬಸವಣ್ಣನವರ ಜೀವನ ಮತ್ತು ಸಾಧನೆ ಕುರಿತ ಪಾಠವಿದ್ದು, ಹಳೆಯ ಪಠ್ಯದಲ್ಲಿನ ಕೆಲವೂ ಪ್ರಮುಖವಾದ ಸಾಲುಗಳನ್ನು ತೆಗೆದು, ಸತ್ಯವನ್ನು ತಿರುಚಿ ಬರೆದಿರುವುದು ಬಸವತತ್ವದ ಅನುಯಾಯಿಗಳಿಗೆ ತುಂಬಾ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹಳೆಯ ಪಠ್ಯದಲ್ಲಿಯ ಸತ್ಯಾಂಶಗಳನ್ನು ಬದಲಾಯಿಸುವ ಅವಶ್ಯಕತೆ ಏನಿತ್ತು? ಬಸವಣ್ಣನವರನ್ನು ಪ್ರಜಾತಂತ್ರದ ಮೊದಲಿಗರೆಂದು ಭಾರತ ದೇಶದ ಪ್ರಧಾನಿ ಹಾಗೂ ಇಡೀ ವಿಶ್ವವೇ ಕೊಂಡಾಡುತ್ತಿರುವಾಗ ಕರ್ನಾಟಕ ಸರ್ಕಾರವು ಪಠ್ಯಪುಸ್ತಕದಲ್ಲಿ ಅವರಿಗೆ ಅಪಚಾರ ಎಸಗುವ ಪಠ್ಯ ಸೇರಿಸಿದ್ದು ದುರ್ದೈವದ ಸಂಗತಿ. ಕಾರಣ ಸರ್ಕಾರವು ಕೂಡಲೇ ಈ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರೆಂಬುದು ಸತ್ಯಕ್ಕೆ ದೂರವಾದುದು. ಬಸವಣ್ಣನವರು ಜಾತಿ-ವರ್ಣ-ವರ್ಗ-ಲಿಂಗಭೇದ ರಹಿತವಾದ ಸರ್ವ ಸಮಾನತೆಯನ್ನು ಪ್ರತಿಪಾದಿಸುವ ಹೊಸದಾದ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಸಮ-ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಬಸವಣ್ಣನವರು ಭೋದಿಸಿದ್ದು ಷಟಸ್ಥಲ ಸಿದ್ದಾಂತ ಎಂದು ಅವರು ಹೇಳಿದ್ದಾರೆ.
ದೋಷಗಳಿಂದ ಕೂಡಿದ ಈ ಪಠ್ಯಪುಸ್ತಕವನ್ನು ಕೂಡಲೇ ಹಿಂಪಡೆಯಬೇಕು. ಪರಿಷ್ಕೃತ ಪಠ್ಯದಲ್ಲಿ ಆಗಿರುವ ಎಲ್ಲ ಲೋಪಗಳನ್ನು ಸರಿಪಡಿಸಿ ಹೊಸ ಪಠ್ಯಪುಸ್ತಕಗಳನ್ನು ಮುದ್ರಿಸಬೇಕು. ಮತ್ತೇ ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ಜಾಗೃತಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.