ಬೀದರ್: ಹೊಸ ವರ್ಷಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ವತಿಯಿಂದ ನಗರದಲ್ಲಿ ಬುಧವಾರ ‘ಬೇಟಿ ಪಢಾವೋ, ಬೇಟಿ ಬಚಾವೋ’ ಜಾಗೃತಿ ನಡಿಗೆ ನಡೆಯಿತು.
ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಹಸಿರು ಧ್ವಜ ತೋರಿಸುವ ಮೂಲಕ ನಡಿಗೆಗೆ ಚಾಲನೆ ನೀಡಿದರು. ಐಎಂಎ ಸಭಾ ಭವನದ ಆವರಣದಿಂದ ಆರಂಭವಾದ ಜಾಥಾ ಕೆ.ಇ.ಬಿ. ರಸ್ತೆ, ರೋಟರಿ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಮರಳಿ ಐಎಂಎ ಸಭಾ ಭವನಕ್ಕೆ ಬಂದು ಸಮಾರೋಪಗೊಂಡಿತು.
ಸಂಘಟನೆಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಬ್ಯಾನರ್ ಹಾಗೂ ಭಿತ್ತಿಚಿತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಮನಕುಲದ ಅಭಿವೃದ್ಧಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು. ಲಿಂಗ ತಾರತಮ್ಯ ನಿವಾರಿಸಬೇಕು ಎಂದು ಮನವಿ ಮಾಡಿದರು.
ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲಲಿತಮ್ಮ, ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್, ಬೀದರ್ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಧೂಳಪ್ಪ ಪಾಟೀಲ, ಕಾರ್ಯದರ್ಶಿ ನಾಗೇಶ ಪಾಟೀಲ, ರೋಟರಿ ಕ್ಲಬ್ ಅಧ್ಯಕ್ಷ ನಾಗೇಂದ್ರ ನಿಟ್ಟೂರೆ, ಕಾರ್ಯದರ್ಶಿ ವೀರೇಶ ಚಿದ್ರಿ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಉಜ್ವಲಾ ಟೊಣ್ಣೆ, ಕಾರ್ಯದರ್ಶಿ ಉಮಾ ಗಾದಗೆ, ಗೀತಾ ಬೆಲ್ದಾಳೆ, ಬೆಳಗು ಸಂಸ್ಥೆಯ ಉಪಾಧ್ಯಕ್ಷೆ ಮಂಜುಳಾ ಮೂಲಗೆ, ಕಾರ್ಯದರ್ಶಿ ಗುರುದೇವ, ಸಮಾಜ ಸೇವಾ ಸಮಿತಿ, ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.