ಭಾಲ್ಕಿ: ತಾಲ್ಲೂಕಿನ ಗಡಿಭಾಗದ ಭಾಟಸಾಂಗವಿ ಗ್ರಾಮದ ನಾಮದೇವ ಭೀಮರಾವ್ ಝಳಕೆ(65) ಗುರುವಾರ ಮಾಂಜ್ರಾ ನದಿ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ನಾಮದೇವ ಅವರು ಸಂಬಂಧಿಕರ ಭೇಟಿಯಾಗಿ ಮೇಹಕರ್ ಗ್ರಾಮಕ್ಕೆ ತೆರಳಿದ್ದರು. ಭಾಟಸಾಂಗವಿ ಮತ್ತು ನಾರದ ಸಂಗಮ ನಡುವೆ ಹರಿಯುವ ಮಾಂಜ್ರಾ ನದಿ ನೀರು ಹರಿವು ಕಡಿಮೆ ಇದ್ದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ನದಿ ದಾಟಿ ಮೇಹಕರ್ ಗ್ರಾಮಕ್ಕೆ ತೆರಳಿದ್ದರು. ಸಂಜೆ ಇದೇ ಮಾರ್ಗವಾಗಿ ಸ್ವಗ್ರಾಮಕ್ಕೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹರಿದು ಬಂದಿದ್ದರಿಂದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ಈ ಕುರಿತು ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಸೂಚನೆ ಮೇರೆಗೆ ಅಗ್ನಿಶಾಮಕದಳ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯ ಮುಂದುವರಿಸಿದೆ. ಅಗ್ನಿಶಾಮಕ ದಳದ ಹೆಚ್ಚುವರಿ ಸಿಬ್ಬಂದಿ ಎರಡು ಬೋಟ್ ಸಹಾಯದ ಮೂಲಕ ಹುಡುಕಾಟ ನಡೆಸಿದ್ದಾರೆ. ಶುಕ್ರವಾರ ಸಂಜೆವರೆಗೂ ನಾಮದೇವ ಅವರ ಪತ್ತೆಯಾಗಿಲ್ಲ.
ತಾಲ್ಲೂಕು ಆಡಳಿತ ಶವದ ಹುಡುಕಾಟಕ್ಕಾಗಿ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತಿದೆ ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ತಿಳಿಸಿದ್ದಾರೆ.
ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಪಿಎಸ್ಐ ಅಶೋಕ ಪಾಟೀಲ, ಅಗ್ನಿಶಾಮಕ ಅಧಿಕಾರಿ ದತ್ತಾತ್ರೇಯ ಸೇರಿದಂತೆ ಹಲವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.