
ಹುಲಸೂರ: ಭಾಲ್ಕಿ-ವಲಂಡಿ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಭಾಲ್ಕಿ ವಿಭಾಗೀಯ ಘಟಕದ ವತಿಯಿಂದ ನೂತನವಾಗಿ ಹೊಸ ಬಸ್ ಸಂಚಾರ ಆರಂಭಗೊಂಡಿದೆ. ಸಮೀಪದ ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮದಲ್ಲಿ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ, ಕಬ್ಬುಗಳಿಂದ ಅಲಂಕರಿಸಿದರು. ಗ್ರಾಮದ ಮುಖಂಡರು ಶನಿವಾರ ಚಾಲನೆ ನೀಡಿದರು.
ನೂತನವಾಗಿ ಆರಂಭಗೊಂಡ ಭಾಲ್ಕಿ-ವಲಂಡಿ ಸಾರಿಗೆ ಮುಂಜಾನೆ 8.30ಕ್ಕೆ ವಲಂಡಿದಿಂದ ಬಿಡುಗಡೆಯಾಗಿ, ಅಳವಾಯಿ, ಮೆಹಕರ, ಕೊಂಗಳಿ, ಹುಲಸೂರ ಮಾರ್ಗವಾಗಿ ಭಾಲ್ಕಿಗೆ ತಲುಪಲಿದೆ ಎಂದು ನಿರ್ವಾಹಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಗ್ರಾಮದ ಮುಖಂಡ ಗುಂಡಪ್ಪ ಗಂದಗೆ ಮಾತನಾಡಿ, ‘ಬೆಳಿಗ್ಗೆ ಬಸ್ ಸಂಚಾರ ಇಲ್ಲದೆ ಸರ್ಕಾರಿ ಕೆಲಸದ ನಿಮಿತ್ತ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪದೆ ಸರ್ಕಾರಿ ನೌಕರರು, ಮಹಿಳೆಯರು, ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೆ ತಂದ ಬಳಿಕ ನೂತನ ಬಸ ಸಂಚಾರ ಆರಂಭಗೊಂಡಿದೆ. ಈ ಭಾಗದ ಪ್ರಯಾಣಿಕರು ನೂತನ ಸಾರಿಗೆ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಅಳವಾಯಿ ಗ್ರಾಮದ ದಿಲೀಪ ರಾಮಚಿರೆ, ದಿಲೀಪ ಕಲ್ಯಾಣಕರ, ಸಂತೋಷ ಗಂದಗೆ, ಮಾಧವ ಬೊರೊಲೆ, ಸುಭಾಷ ಲಾಂಡಗೆ, ಸಂಜೀವ ಕುಲಕರ್ಣಿ, ಸೋಮನಾಥ ಗಂದಗೆ, ಪ್ರೇಮ ಗಂದಗೆ, ಅಮರ ಗಂದಗೆ, ಶಾಮ ಸೂರ್ಯವಂಶಿ, ಅನಿಲ ಗಂದಗೆ ಸೇರಿ ಗ್ರಾಮದ ಮುಖಂಡರು, ಯುವಕರು, ಪ್ರಯಾಣಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.