ADVERTISEMENT

ದಲಿತ ಸಂಘಟನೆಗಳು ಒಗ್ಗೂಡಲಿ

ಭೀಮಾ ಕೋರೆಂಗಾವ್‌ ವಿಜಯೋತ್ಸವ: ಮುಖಂಡ ತಾತೇರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 10:30 IST
Last Updated 5 ಜನವರಿ 2020, 10:30 IST
ಬಸವಕಲ್ಯಾಣದಲ್ಲಿ ದಲಿತ ಸಂಘಟನೆಗಳಿಂದ ಶುಕ್ರವಾರ ನಡೆದ ತಾಲ್ಲೂಕುಮಟ್ಟದ ಭೀಮಾಕೋರೆಗಾಂವ್‌ ವಿಜಯೋತ್ಸವದಲ್ಲಿ ಸಾವಿತ್ರಿಬಾಯಿ ಫುಲೆ ಕುರಿತಾದ ಗ್ರಂಥವನ್ನು ಶಾಸಕ ಬಿ.ನಾರಾಯಣರಾವ್ ಬಿಡುಗಡೆ ಮಾಡಿದರು
ಬಸವಕಲ್ಯಾಣದಲ್ಲಿ ದಲಿತ ಸಂಘಟನೆಗಳಿಂದ ಶುಕ್ರವಾರ ನಡೆದ ತಾಲ್ಲೂಕುಮಟ್ಟದ ಭೀಮಾಕೋರೆಗಾಂವ್‌ ವಿಜಯೋತ್ಸವದಲ್ಲಿ ಸಾವಿತ್ರಿಬಾಯಿ ಫುಲೆ ಕುರಿತಾದ ಗ್ರಂಥವನ್ನು ಶಾಸಕ ಬಿ.ನಾರಾಯಣರಾವ್ ಬಿಡುಗಡೆ ಮಾಡಿದರು   

ಬಸವಕಲ್ಯಾಣ: ‘ದಲಿತ ಸಂಘಟನೆಗಳು ಒಗ್ಗೂಡಿದರೆ ಶಕ್ತಿ ಹೆಚ್ಚುತ್ತದೆ’ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಲಿತ ಮುಖಂಡ ತಾತೇರಾವ್ ಕಾಂಬಳೆ ಸಲಹೆ ನೀಡಿದ್ದಾರೆ.

ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಶುಕ್ರವಾರ ಇಲ್ಲಿ ನಡೆದ ತಾಲ್ಲೂಕು ಮಟ್ಟದ ಭೀಮಾ ಕೋರೆಗಾಂವ್‌ ವಿಜಯೋತ್ಸವ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿಯಲ್ಲಿ ಅವರು ಮಾತನಾಡಿದರು.

‘ಬಾಬಾಸಾಹೇಬ್ ಅವರು ಸಮತಾ ಸೈನಿಕದಳ ಸ್ಥಾಪಿಸಿದ್ದರು. ಅದರಿಂದ ದಲಿತರಲ್ಲಿ ಒಗ್ಗಟ್ಟು ಬಂದಿತ್ತು. ಆದರೆ, ಈಗ ಅನೇಕ ಸಂಘಟನೆಗಳಿರುವುದರಿಂದ ಸಮಾಜದಲ್ಲಿ ಒಡಕು ಎದ್ದು ಕಾಣುತ್ತಿದೆ. ಡಾ.ಅಂಬೇಡ್ಕರ್ ಅವರು ಮಹಾನ್ ದೇಶಭಕ್ತ ಆಗಿದ್ದರಿಂದಲೇ ಭಾರತೀಯವಾದ ಬೌದ್ಧ ಧರ್ಮವನ್ನು ಸ್ವೀಕರಿಸಿದರು’ ಎಂದರು.

ADVERTISEMENT

ಶಾಸಕ ಬಿ.ನಾರಾಯಣರಾವ್ ಮಾತನಾಡಿ, ‘ಭೀಮಾ ಕೋರೆಗಾಂವ್ ಯುದ್ಧದಲ್ಲಿ 28 ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿದ್ದ ಕೇವಲ 500 ಮಹಾರ್ ಸೈನಿಕರ ಧೈರ್ಯ ಮೆಚ್ಚುವಂಥದ್ದು. ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಕ್ಕೆ ಸರ್ಕಾರದಿಂದ ಶಿಕ್ಷಕರ ದಿನಾಚರಣೆ ಆಯೋಜಿಸಲು ವಿಧಾನ ಮಂಡಲದ ಅಧಿವೇಶನದಲ್ಲಿ ಆಗ್ರಹಿಸುತ್ತೇನೆ’ ಎಂದರು.

ಮುಖಂಡ ರವೀಂದ್ರ ಗಾಯಕವಾಡ ಮಾತನಾಡಿ, ‘ಯುವಜನತೆ ಬಾಬಾಸಾಹೇಬ್ ಅವರ ಸಂದೇಶದ ಪಾಲನೆ ಮಾಡಬೇಕು’ ಎಂದರು.

ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸುರೇಶ ಮೋರೆ ಮಾತನಾಡಿ, ‘ಕೋರೆಗಾಂವ್‌ ಯುದ್ಧದ ವಿಜಯ ಅಸ್ಪೃಶ್ಯತೆ ವಿರುದ್ಧದ ಗೆಲುವಾಗಿತ್ತು’ ಎಂದು ಹೇಳಿದರು.

‘ಅನೇಕ ಕಷ್ಟಗಳನ್ನು ಅನುಭವಿಸಿ ಮಹಿಳೆಯರಿಗೆ ಶಿಕ್ಷಣದ ಬಾಗಿಲು ತೆರೆದ ಸಾವಿತ್ರಿಬಾಯಿ ಫುಲೆ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಆಗಿದ್ದಾರೆ’ ಎಂದರು.

ತೆಲಂಗಾಣ ವಿಧಾನಪರಿಷತ್ ಸದಸ್ಯ ಟಿ.ರಾಮುಲು. ಭಂತೆ ಧಮ್ಮನಾಗ ಹತ್ಯಾಳ ಮಾತನಾಡಿದರು.

ಬೇಲೂರ ಪಂಚಾಕ್ಷರಿ ಸ್ವಾಮೀಜಿ, ರವಿಗುರೂಜಿ ಪ್ರತಾಪುರ ನೇತೃತ್ವ ವಹಿಸಿದ್ದರು. ಅರವಿಂದ ಚಾಂದೆ ರಚಿಸಿದ ಸಾವಿತ್ರಿಬಾಯಿ ಫುಲೆ ಕುರಿತಾದ ‘ಚುಕ್ಕಿಯ ಚಿತ್ತಾರ’ ಕವನಗಳ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ಮುಖಂಡರಾದ ಅರ್ಜುನ ಕನಕ, ನೀಲಕಂಠ ರಾಠೋಡ, ಶರಣು ಸಲಗರ, ದಿಲೀಪ ಶಿಂಧೆ, ಯುವರಾಜ ಭೆಂಡೆ, ಪ್ರಹ್ಲಾದ ಮೋರೆ, ತಹಶೀಲ್ದಾರ್ ಸಾವಿತ್ರಿ ಸಲಗರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ಬೌದ್ಧ ಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ನಾಗನಾಥ ವಾಡೇಕರ್, ಸಮಿತಿ ಗೌರವಾಧ್ಯಕ್ಷ ಪಂಕಜ್ ಸೂರ್ಯವಂಶಿ, ಶ್ರೀಕಾಂತ ಕಾಂಬಳೆ ಮಂಠಾಳ, ಅಬಾದಾಸ ಗಾಯಕವಾಡ, ಶೀಲತಲಕುಮಾರ ಶಿಂಧೆ, ಗೌತಮ ಜ್ಯಾಂತೆ, ಯಶವಂತ ತಳೇಕರ, ವಿಜಯಕುಮಾರ ಡಾಂಗೆ, ರವೀಂದ್ರ ಶೃಂಗಾರೆ ಪಾಲ್ಗೊಂಡಿದ್ದರು. ನಂತರ ತಡರಾತ್ರಿವರೆಗೆ ನಾಗಪುರದ ಪ್ರಸಿದ್ಧ ಗಾಯಕಿ ಅಂಜಲಿ ಭಾರತಿ ಅವರಿಂದ ಭೀಮಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.