ADVERTISEMENT

ಬೀದರ್‌ | ಇಷ್ಟಲಿಂಗ ಗೂಟಕ್ಕೆ ನೇತು ಹಾಕದಿರಿ: ಚನ್ನಬಸವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:34 IST
Last Updated 17 ಫೆಬ್ರುವರಿ 2026, 5:34 IST
ಬೀದರ್‌ನ ಬಸವ ಮಂಟಪದಲ್ಲಿ ಭಾನುವಾರ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿದರು
ಬೀದರ್‌ನ ಬಸವ ಮಂಟಪದಲ್ಲಿ ಭಾನುವಾರ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿದರು   

ಬೀದರ್‌: ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ನಗರದ ಬಸವ ಮಂಟಪದಲ್ಲಿ ಭಾನುವಾರ  ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಮಹಾಶಿವರಾತ್ರಿ ಆಚರಿಸಲಾಯಿತು.

ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಪೂಜೆ ನಡೆಸಿಕೊಟ್ಟರು. ಬಳಿಕ ಮಾತನಾಡಿ, ಕೊರಳಲ್ಲಿರುವ ಲಿಂಗವನ್ನು ಗೂಟಕ್ಕೆ ನೇತು ಹಾಕಬಾರದು. ಶಿವರಾತ್ರಿಗೊಮ್ಮೆ ಪೂಜಿಸದೆ ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕೆಂದು ಹೇಳಿದರು.

ಇಷ್ಟಲಿಂಗ ಪೂಜೆಯಿಂದ ದೀರ್ಘಕಾಲಿನ ಕಾಯಿಲೆಗಳು ನಿಯಂತ್ರಣದಲ್ಲಿರುವುದರ ಜೊತೆಗೆ ಮಾನಸಿಕ ನೆಮ್ಮದಿ ಲಭಿಸುತ್ತದೆ. ಆತ್ಮಾನಂದದ ಅನುಭವ, ಧನಾತ್ಮಕ ವಿಚಾರಗಳು ವೃದ್ಧಿಸುತ್ತವೆ. ಲಿಂಗವು ಸೃಷ್ಟಿಕರ್ತನ ಕುರುಹಾಗಿದೆ. ನಮಗೆ ಅನ್ನ, ಅರಿವೆ, ಆಶ್ರಯ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ನಿತ್ಯವೂ ಲಿಂಗಪೂಜೆ ಮಾಡಬೇಕೆಂದು ತಿಳಿಸಿದರು.

ADVERTISEMENT

ಬಸವ ಮಂಟಪದ ಮಾತೆ ಸತ್ಯಾದೇವಿ ಮಾತನಾಡಿ, 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ನೀಡಿದ ಇಷ್ಟಲಿಂಗವು ಸರ್ವಶರಣರಿಗೆ ಪ್ರಾಣವಾಗಿತ್ತು. ಲಿಂಗಪೂಜೆಯ ನಂತರ ತೀರ್ಥಪ್ರಸಾದ ಮಾಡಿದ ನಂತರವೇ ಕಾಯಕ ದಾಸೋಹ ಮಾಡುತಿದ್ದರು.‌ ಇಷ್ಟಲಿಂಗ ವೈಜ್ಞಾನಿಕ ಹಿನ್ನೆಲೆ ಹೊಂದಿದೆ. ತ್ರಾಟಕ ಯೋಗದಿಂದ ಕಣ್ಣಿನ ಕಾಂತಿ ವೃದ್ಧಿಸುವುದರ ಜೊತೆಗೆ ಮನಸ್ಸು ಪ್ರಶಾಂತವಾಗಿರುತ್ತದೆ ಎಂದರು.

ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್‌ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಪ್ರೊ. ವೀರಶೆಟ್ಟಿ ಮೈಲೂರಕರ್ ಬಸವಪೂಜೆ ನೆರವೇರಿಸಿ ಪ್ರಸಾದ ದಾಸೋಹಗೈದರು. ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ್‌ ಸ್ವಾಮಿ, ಪಶುವೈದ್ಯಕೀಯ ವಿ.ವಿ.ಯ ನಿವೃತ್ತ ಡೀನ್ ಸುರೇಶ್‌ ಪಾಟೀಲ್‌, ಉದ್ಯಮಿ ನಾಗಶೆಟ್ಟಿ ದಾಡಗಿ, ಶಿವಶರಣಪ್ಪ ಪಾಟೀಲ್‌ ಹಾರೂರಗೇರಿ, ನಿರ್ಮಲಾ ನಿಲಂಗೆ, ಶಿವಕುಮಾರ್‌ ಪಾರಾ, ವಕೀಲ ಅಶೋಕ್‌ ಮಾನೂರೆ, ಬಸವರಾಜ ಲಾಧಾ, ಬಸವರಾಜ ಸಂಗಮದ, ಮನ್ಮಥಯ್ಯ ಸ್ವಾಮಿ, ಗಣಪತಿ ಬಿರಾದಾರ, ಶ್ರೀನಾಥ ಕೋರೆ ಉಪಸ್ಥಿತರಿದ್ದರು.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಸುಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಲಿಂಗಾಯತ ಧರ್ಮ ಮಹಾಪೀಠದ ಕಾರ್ಯಯೋಜನೆಯ ಭಿತ್ತಿಪತ್ರ ಹಾಗೂ ಗಂಗಾವತಿಯಲ್ಲಿ ಮಾ. 22ರಂದು ನಡೆಯಲಿರುವ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು. ಕಲ್ಯಾಣರಾವ್‌ ಬಂಬುಳಗಿ ವಚನ ಗಾಯನ ಮಾಡಿದರು. ಮಹಾರುದ್ರ ಡಾಕುಳಗೆ ಸ್ವಾಗತಿಸಿದರೆ, ಸತೀಶ್‌ ಪಾಟೀಲ್‌ ನಿರೂಪಿಸಿದರು. ಬಸವಕುಮಾರ ಚಟನಳ್ಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.