ಬೀದರ್: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬೀದರ್ ಸಹಯೋಗದಲ್ಲಿ ವಿಶೇಷ ಕಾರ್ಯಕಾರಿ ಸಮಿತಿ ಸಭೆ ನಗರ ಹೊರವಲಯದ ಚಿಕ್ಕಪೇಟೆ ಸಮೀಪದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಸಂಜೆ ನಡೆಯಿತು.
ಬೀದರ್ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಬಿದ್ರಿ ಕಲೆಗೆ ಇನ್ನಷ್ಟು ಪ್ರೋತ್ಸಾಹ ಕೊಡಬೇಕು. ಕೃಷಿಯನ್ನೇ ಜಿಲ್ಲೆ ಹೆಚ್ಚಾಗಿ ಅವಲಂಬಿಸಿದ್ದು, ಕಾರಂಜಾ ಜಲಾಶಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು. ಸ್ಥಳೀಯವಾಗಿ ರೈತರು ಬೆಳೆಯುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ಶೀತಲೀಕರಣ ಘಟಕಗಳನ್ನು ಸ್ಥಾಪಿಸಬೇಕು. ಬೀದರ್ ಮತ್ತು ಬಸವಕಲ್ಯಾಣವನ್ನು ಟೂರಿಸಂ ಸರ್ಕಿಟ್ ಎಂದು ಘೋಷಿಸಬೇಕು. ಸೋಯಾ ಎಣ್ಣೆ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ಕೈಗಾರಿಕೆ ಆರಂಭಿಸಬೇಕು. ಸ್ಥಳೀಯ ಯುವಕ,ಯುವತಿಯರಿಗೆ ಕೌಶಲ, ಡಿಜಿಟಲ್ ತರಬೇತಿ ಕೊಡಬೇಕು. ಇದಕ್ಕೆ ಎಫ್ಕೆಸಿಸಿಐ ಸಂಪೂರ್ಣ ಸಹಕಾರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಿ, ಕೈಗಾರಿಕೆಗಳ ಉತ್ತೇಜನಕ್ಕೆ ಸರ್ಕಾರದಿಂದ ಅಗತ್ಯ ಸೌಕರ್ಯ, ನೆರವು ನೀಡಲಾಗುವುದು. ಇದರಿಂದ ಉದ್ಯೋಗಗಳ ಸೃಷ್ಟಿಗೂ ಅನುಕೂಲವಾಗಲಿದೆ ಎಂದರು.
ಎಫ್ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಹಿರಿಯ ಉಪಾಧ್ಯಕ್ಷರಾದ ಉಮಾರೆಡ್ಡಿ, ಟಿ. ಸಾಯಿರಾಮ್ ಪ್ರಸಾದ್, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಶೆಟಕಾರ, ಕಾರ್ಯದರ್ಶಿ ವೀರೇಂದ್ರ ಶಾಸ್ತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ, ಉದ್ಯಮಿಗಳಾದ ಸೋಮಶೇಖರ್ ಪಾಟೀಲ್, ಡಾ. ರಜನೀಶ್ ವಾಲಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.