ADVERTISEMENT

ಬೀದರ್: ಪರಿಶಿಷ್ಟರು ಬೌದ್ಧ ಧರ್ಮ ಬರೆಸಿದರೆ ಮೀಸಲಾತಿ ರದ್ದಾಗಲ್ಲ; ರಮೇಶ ಡಾಕುಳಗಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 10:13 IST
Last Updated 21 ಸೆಪ್ಟೆಂಬರ್ 2025, 10:13 IST
   

ಬೀದರ್‌: ‘ಸಂವಿಧಾನದ ಪ್ರಕಾರ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಪರಿಶಿಷ್ಟರೆಲ್ಲ ಜಾತಿ ಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸಬೇಕು. ಇದರಿಂದ ಮೀಸಲಾತಿ ರದ್ದಾಗುವುದಿಲ್ಲ’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ತಿಳಿಸಿದರು.

ಧರ್ಮ ಕಾಲಂನಲ್ಲಿ ಬೌದ್ಧ. ಜಾತಿ ಹೊಲೆಯ, ಛಲವಾದಿ, ಮಾದಿಗ ಎಂದು ದಾಖಲಿಸಿದರೆ ದಲಿತರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯ ರದ್ದಾಗುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ 1999ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರೆ ಅವರ ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ರದ್ದಾಗದೇ ಯಥಾವತ್ತಾಗಿ ಮುಂದುವರೆಯುತ್ತದೆ. ಕೇಂದ್ರ ಸರ್ಕಾರದ ಈ ಆದೇಶಕ್ಕೆ ಪೂರಕವಾಗಿ ವಿವಿಧ ರಾಜ್ಯ ಸರ್ಕಾರಗಳು ಮರು ಆದೇಶ ಹೊರಡಿಸಿ ಪರಿಶಿಷ್ಟ ಜಾತಿಯ ಬೌದ್ಧರಿಗೆ ಮೀಸಲಾತಿ ಸೌಲಭ್ಯ ನೀಡುತ್ತ ಬಂದಿವೆ. ಆದಕಾರಣ ದಲಿತರು ಗೊಂದಲಕ್ಕೆ ಒಳಗಾಗಬಾರದು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿ ಜನಾಂಗದವರು ಧರ್ಮದ ಕಾಲಂನಲ್ಲಿ ಬೌದ್ದ, ಜಾತಿ ಕಾಲಂನಲ್ಲಿ ಹೊಲೆಯ, ಮಾದಿಗ ಎಂಬಿತ್ಯಾದಿ ಜಾತಿಗಳ ಹೆಸರು ಬರೆಸಬೇಕು. ಉಪ ಜಾತಿಗಳಲ್ಲಿ ಸಹ ಜಾತಿಯಲ್ಲಿರುವಂತೆ ಹೊಲೆಯ, ಛಲವಾದಿ, ಮಾದಿಗ, ಭೋವಿ, ವಡ್ಡರ್, ಲಮಾಣಿ ಇತ್ಯಾದಿ ಪದಗಳನ್ನು ಬರೆಸಬೇಕೆಂದು ಹೇಳಿದರು.

ADVERTISEMENT

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬೌದ್ಧ ಸಂಘ ಸಂಸ್ಥೆಗಳು, ಬೌದ್ಧ ಉಪಾಸಕರು, ದಲಿತ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯದಾದ್ಯಂತ ಜನಜಾಗೃತಿ ಮೂಡಿಸಲು ರಾಜ್ಯಮಟ್ಟದಲ್ಲಿ ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಅಂದೋಲನ ಸಮಿತಿ ರಚಿಸಲಾಗಿದೆ. ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಸಭೆಯಲ್ಲಿ ಸಹ ಧರ್ಮ ಬೌದ್ಧ ಮತ್ತು ಜಾತಿ ಹೊಲೆಯ, ಭಲವಾದಿ ಎಂದು ದಾಖಲಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ತುಕಾರಾಮ ಲಾಡಕರ್, ಪ್ರಮುಖರಾದ ರಮೇಶ ಮಂದಕನಳ್ಳಿ, ಶಿವರಾಜ ಲಾಡಕರ್, ವಿಠಲ ಲಾಡಕರ್, ರಾಜಕುಮಾರ ಚಂದನ್, ಅಂಕುಶ ಡಾಂಗೆ, ಅಂಬರೀಶ ಅತಿವಾಳ, ರವೀಂದ್ರ ಭಾಲ್ಕಿ ಇತರರಿದ್ದರು.

ಅಂಬೇಡ್ಕರ್‌ ಹೇಳಿದಂತೆ ನಡೆಯಿರಿ: ’1956 ಅಕ್ಟೋಬರ್‌ 14ರಂದು  ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಮಹಾರಾಷ್ಟ್ರದ ನಾಗಪುರದಲ್ಲಿ ಸುಮಾರು 5 ಲಕ್ಷ ಬೌದ್ದ ಅನುಯಾಯಿಗಳೊಂದಿಗೆ ಬೌದ್ದ ಧರ್ಮ ಸ್ವೀಕರಿಸಿದ್ದರು. ಆ ಸಮಯದಲ್ಲಿ ಅವರು, ‘ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದರೂ ಬೌದ್ದಧರ್ಮಿಯನಾಗಿ ಸಾಯಲು ಇಷ್ಟಪಡುತ್ತೇನೆ. ಏಕೆಂದರೆ ಹಿಂದೂ ಧರ್ಮ ಸುಧಾರಿಸಲು ನಾನು ಎಷ್ಟೇ ಪ್ರಯತ್ನ ಪಟ್ಟರೂ ಅದು ಸುಧಾರಿಸಲು ಸಾಧ್ಯವಾಗಲಿಲ್ಲ’ ಎಂದು. ಅಂಬೇಡ್ಕರ್ ಅವರು ಹೇಳಿದಂತೆ ಎಲ್ಲರೂ ಬೌದ್ದ ಧರ್ಮ ಸ್ವೀಕರಿಸಿ ತಮ್ಮ ಮೀಸಲಾತಿ ಉಳಿಸಿಕೊಳ್ಳಬೇಕು’  ಎಂದು ರಮೇಶ ಡಾಕುಳಗಿ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.