
ಬೀದರ್: ಜ. 6ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ 11.30ಕ್ಕೆ ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಸುಮಾರು ಆರು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಣದೂರ ವೈಶಾಲಿನಗರ ಬುದ್ದವಿಹಾರದ ಭಂತೆ ಸಂಘರಕ್ಷಿತ ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ಶ್ರೀಲಂಕಾದಿಂದ ತಂದಿರುವ ಭಗವಾನ ಬುದ್ಧರ ಪವಿತ್ರ ಅಸ್ತಿಯ ದರ್ಶನ ಮಾಡಿ, ಬುದ್ಧವಂದನೆ ಸಲ್ಲಿಸಿ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಆನಂತರ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ವಿಶ್ವಕ್ಕೆ ಶಾಂತಿ, ಪ್ರೀತಿ, ಕರುಣೆಯ ಬೆಳಕು ನೀಡಿದ ಭಗವಾನ್ ಬುದ್ಧರಿಗೆ ಸೇರಿದ ಸ್ಥಳ, ಸಾಮ್ರಾಟ್ ಅಶೋಕ್ ನಿರ್ಮಿಸಿದ ಮಹಾಸ್ತೂಪದ ಪಾವನ ಸ್ಥಳ, ಜಗತ್ತಿನ ಬೌದ್ಧರ ಪವಿತ್ರ ಕ್ಷೇತ್ರವಾದ ಬುದ್ಧಗಯಾದ ಮಹಾಬೋಧಿ, ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆನ್ನುವುದು ಮುಖ್ಯ ಬೇಡಿಕೆಯಾಗಿದೆ. ಫೆಬ್ರುವರಿ 12ರಂದು ದೆಹಲಿ ಚಲೋ ಮಿಷನ್ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖಂಡರಾದ ಸುರೇಶ ಜೋಜನಾಕರ್, ಕಪಿಲ್ ಗೋಡಬೊಲೆ, ಅಮೃತ ಮುತ್ತಂಗಿಕರ್, ರಾಜಕುಮಾರ ಮೂಲಭಾರತಿ, ಅಂಬಾದಾಸ ಚಕ್ರವರ್ತಿ, ಶಶಿಧರ ಹಾಜರಿದ್ದರು.