ADVERTISEMENT

ಬೀದರ್ ತಾಲ್ಲೂಕು: ಶೇ 50 ರಷ್ಟು ಸೋಯಾ ಬಿತ್ತನೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 8:34 IST
Last Updated 29 ಮೇ 2022, 8:34 IST
ಬೀದರ್ ತಾಲ್ಲೂಕಿನ ಅಷ್ಟೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಿರುವುದನ್ನು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಾಳೆ ವೀಕ್ಷಿಸಿದರು
ಬೀದರ್ ತಾಲ್ಲೂಕಿನ ಅಷ್ಟೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಿರುವುದನ್ನು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಾಳೆ ವೀಕ್ಷಿಸಿದರು   

ಜನವಾಡ: ಮುಂಗಾರು ಹಂಗಾಮಿನಲ್ಲಿ ಬೀದರ್ ತಾಲ್ಲೂಕಿನ ಒಟ್ಟು ಬಿತ್ತನೆ ಕ್ಷೇತ್ರದ ಪೈಕಿ ಶೇ 50 ರಷ್ಟು ಪ್ರದೇಶದಲ್ಲಿ ಸೋಯಾ ಅವರೆ ಬಿತ್ತನೆಯಾಗುವ ಸಾಧ್ಯತೆ ಇದೆ.

ತಾಲ್ಲೂಕಿನ ಒಟ್ಟು ಬಿತ್ತನೆ ಕ್ಷೇತ್ರ 49,800 ಹೆಕ್ಟೇರ್ ಆಗಿದ್ದರೆ, ಈ ಪೈಕಿ 25,000 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಅವರೆ ಬಿತ್ತನೆ ಗುರಿ ಇದೆ.

ಉಳಿದಂತೆ ತಾಲ್ಲೂಕಿನಲ್ಲಿ 11 ಸಾವಿರ ಹೆಕ್ಟೇರ್ ತೊಗರಿ, 3,500 ಹೆಕ್ಟೇರ್ ಹೆಸರು, 3,100 ಹೆಕ್ಟೇರ್ ಉದ್ದು, 1,500 ಹೆಕ್ಟೇರ್ ಹೈಬ್ರಿಡ್ ಜೋಳ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಬೀದರ್ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಾಳೆ ತಿಳಿಸಿದ್ದಾರೆ.

ತಾಲ್ಲೂಕಿನ 6 ರೈತ ಸಂಪರ್ಕ ಕೇಂದ್ರ ಹಾಗೂ 19 ಉಪ ಕೇಂದ್ರಗಳಲ್ಲಿ ಸೋಯಾಬೀನ್, ಉದ್ದು, ಹೆಸರು, ತೊಗರಿ, ಜೋಳ, ಮೆಕ್ಕೆಜೋಳ ಬೀಜ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ 13,000 ಕ್ವಿಂಟಲ್ ಸೋಯಾ ಅವರೆ ಹಾಗೂ ಇತರ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರೈತರು ಕೃಷಿ ಇಲಾಖೆಯ ಸೌಲಭ್ಯ ಪಡೆಯಲು ಎಫ್‍ಐಡಿ (ರೈತರ ಗುರುತಿನ ಸಂಖ್ಯೆ) ಅವಶ್ಯಕವಾಗಿದೆ. ಒಂದು ವೇಳೆ ಎಫ್‍ಐಡಿ ರಚನೆಯಾಗದಿದ್ದಲ್ಲಿ ರೈತರು ಮೇ 30 ರ ಒಳಗೆ ಪಹಣಿ, ಹೋಲ್ಡಿಂಗ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಎಫ್‍ಐಡಿ ರಚನೆ ಮಾಡಿಕೊಳ್ಳಬೇಕು. ಆರ್‍ಡಿ ಸಂಖ್ಯೆ ತಿದ್ದುಪಡಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಕೂಡಲೇ ಸಂಬಂಧಪಟ್ಟ ತಹಶೀಲ್ದಾರರಿಂದ ಹೊಸ ಆರ್‍ಡಿ ಸಂಖ್ಯೆ ತೆಗೆದುಕೊಂಡು ಕೃಷಿ ಇಲಾಖೆಯ ಸೌಲಭ್ಯ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.