ADVERTISEMENT

‘ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಮಿತಿ’

ಬಿಜೆಪಿ ಧ್ವಜ, ಬ್ಯಾನರ್‌ ಮರಳಿಸಿದ ಮಲ್ಲಿಕಾರ್ಜುನ ಖೂಬಾ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 3:27 IST
Last Updated 6 ಜುಲೈ 2021, 3:27 IST
ಬಸವಕಲ್ಯಾಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಧ್ವಜ, ಬ್ಯಾನರ್‌ಗಳನ್ನು ಮರಳಿಸಿದರು
ಬಸವಕಲ್ಯಾಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಧ್ವಜ, ಬ್ಯಾನರ್‌ಗಳನ್ನು ಮರಳಿಸಿದರು   

ಬಸವಕಲ್ಯಾಣ: ‘ಕ್ಷೇತ್ರದ ಅಭಿವೃದ್ಧಿ ಪರವಾಗಿ ಹಾಗೂ ಅನ್ಯಾಯದ ವಿರುದ್ಧವಾಗಿ ಹೋರಾಟಕ್ಕೆ ಜಾತಿ, ಪಕ್ಷ ರಹಿತವಾದ ನಾಗರಿಕ ಹೋರಾಟ ಸಮಿತಿಯನ್ನು ಶೀಘ್ರದಲ್ಲಿ ರಚಿಸಲಾಗುವುದು’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ತಿಳಿಸಿದರು.

ಅವರು ಸೋಮವಾರ ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಈಚೆಗೆ ನಡೆದ ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ದೊರಕದ ಕಾರಣ ಪಕ್ಷೇತರನಾಗಿ ಸ್ಪರ್ಧಿಸಿದ ಕಾರಣಕ್ಕಾಗಿ ನನಗೆ ಉಚ್ಛಾಟನೆ ಪತ್ರ ಕಳುಹಿಸಲಾಗಿದೆ. ಆದ್ದರಿಂದ ಆ ಪಕ್ಷದಲ್ಲಿ ಉಳಿಯುವ ಪ್ರಶ್ನೆಯೇ ಬರುವುದಿಲ್ಲ. ಮತದಾರರು ನನಗೆ ಎರಡು ಸಲ ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಈ ಚುನಾವಣೆಯಲ್ಲೂ 9 ಸಾವಿರಕ್ಕಿಂತ ಅಧಿಕ ಮತಗಳನ್ನು ನೀಡಿದ್ದಾರೆ. ಆದ್ದರಿಂದ ಸುಮ್ಮನೆ ಕುಳಿತುಕೊಳ್ಳದೆ ಅವರ ಪರವಾಗಿ ರಾಜಕೀಯದಲ್ಲಿ ಸಕ್ರಿಯ ಆಗಿರುತ್ತೇನೆ’ ಎಂದರು.

ADVERTISEMENT

‘ಕೋವಿಡ್ ನಿಯಮ ಸಡಿಲಿಕೆಯ ನಂತರದಲ್ಲಿ ಬೃಹತ್ ಸಭೆ ಆಯೋಜಿಸಿ ಹೋರಾಟ ಸಮಿತಿ ರಚಿಸಲಾಗುತ್ತದೆ. ಅಲ್ಲದೆ ಅನ್ಯ ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ನಿರ್ಣಯಿಸಲಾಗುತ್ತದೆ. ಶಾಸಕರಾಗಿ ಆಯ್ಕೆ ಆಗಿರುವ ಶರಣು ಸಲಗರ ಅವರಿಗೆ ಸುಮ್ಮನೆ ವಿರೋಧಿಸುವುದಿಲ್ಲ. ಈ ಮೊದಲು ನಾನು ಕೆಲ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದೇನೆ. ಕೆಲ ಸಮಸ್ಯೆಗಳು ಬಗೆಹರಿಯದೆ ಉಳಿದಿದ್ದು ಅವುಗಳನ್ನು ಪೂರ್ಣಗೊಳಿಸಲು ಅವರ ಕಚೇರಿಗೆ ಹೋಗಿ ಭೇಟಿಯಾಗಿ ಕೇಳಿಕೊಳ್ಳುತ್ತೇನೆ’ ಎಂದರು.

ಬಿಜೆಪಿ ಧ್ವಜ ಮರಳಿಸಿದ ಖೂಬಾ: ಅವರು ತಮ್ಮ ನಿವಾಸದಿಂದ ಡಾ.ಅಂಬೇಡ್ಕರ್ ವೃತ್ತಕ್ಕೆ ಹಾಗೂ ಬಸವೇಶ್ವರ ವೃತ್ತಕ್ಕೆ ಹೋಗಿ ಪ್ರತಿಮೆಗಳಿಗೆ ಪುಷ್ಪಮಾಲೆ ಅರ್ಪಿಸಿ ನಂತರ ಬೆಂಬಲಿಗರೊಂದಿಗೆ ಬಿಜೆಪಿ ಕಚೇರಿಗೆ ಹೋಗಿ ತಮ್ಮ ಬಳಿ ಇರುವ ಧ್ವಜ, ನಾಮಫಲಕ, ಪೋಸ್ಟರ್‌ಗಳನ್ನು ಪಕ್ಷದ ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ ಅವರಿಗೆ ಮರಳಿಸಿದರು.

ಪ್ರಮುಖರಾದ ಡಾ.ಪೃಥ್ವಿರಾಜ ಬಿರಾದಾರ, ರಾಜೀವ ಪಾಟೀಲ ಹಳ್ಳಿ, ದಿಲೀಪಗಿರಿ ಗೋಸಾಯಿ, ಪುಷ್ಪರಾಜ ಹಾರಕೂಡೆ, ಸಂಜೀವ ಗಾಯಕವಾಡ, ರವಿ ಗುಂಗೆ, ಶಿವಕುಮಾರ ಬಿರಾದಾರ, ನೀಲೇಶ ಖೂಬಾ, ಬಸವರಾಜ ಖೂಬಾ, ಮಹೇಶ ಸುಂಟನೂರೆ, ಇಸ್ಮಾಯಿಲಸಾಬ್ ಬೆಳಕೋಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.