ಜನವಾಡ: ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ 20 ಮಂದಿ ರಕ್ತದಾನ ಮಾಡಿದರು.
‘ರಕ್ತದಾನ ಮಾನವೀಯ ಕಾರ್ಯವಾಗಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳ ಪ್ರಾಣ ಉಳಿಸಲು ನೆರವಾಗುತ್ತದೆ’ ಎಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿ ಡಾ. ಹೇಮಾವತಿ ಪಾಟೀಲ ಹೇಳಿದರು.
ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹೀಗಾಗಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಮನ್ವಯಾಧಿಕಾರಿ ಡಾ.ಸಂಜೀವಕುಮಾರ ತಾಂದಳೆ ಸಲಹೆ ಮಾಡಿದರು.
ಸಾಂಸ್ಕೃತಿಕ ಸಂಯೋಜಕ ಪ್ರೊ. ಮಹೇಶಕುಮಾರ, ದೈಹಿಕ ಶಿಕ್ಷಣ ನಿರ್ದೇಶಕಿ ಊರ್ವಶಿ ಕೊಡ್ಲಿ, ಅಯೂಬ್ ಅಹಮ್ಮದ್, ಸತ್ಯಶೀಲಾ, ಮನ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರೇಮ ಭಾಸ್ಕರ್, ಸಿಬ್ಬಂದಿ ಸುನೀತಾ, ಭೂಷಣ, ಜಿಲ್ಲಾ ರಕ್ತನಿಧಿ ಕೇಂದ್ರದ ಶಾಮಪ್ಪ ಗಂದಿಗುಡೆ, ಮಹೇಶ ಶಹಾಪುರೆ, ಶೇಖರ, ಶಿವಶರಣಪ್ಪ ಹಾಗೂ ಲತಾ ಇದ್ದರು.
ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಜಿಲ್ಲಾ ರಕ್ತನಿಧಿ ಕೇಂದ್ರದ ವತಿಯಿಂದ ಶಿಬಿರ ಆಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.