ADVERTISEMENT

ಹುಲಸೂರ: ಅನ್ನದಾತರ ನಿದ್ದೆಗೆಡಿಸಿದ ಕೇಬಲ್ ಕಳ್ಳರ ಕಾಟ

ಸಾಯಗಾಂವ ಹೋಬಳಿಯಲ್ಲಿ ಬೇಸತ್ತ ರೈತರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:22 IST
Last Updated 5 ಜನವರಿ 2026, 5:22 IST
<div class="paragraphs"><p>ರೈತರೊಬ್ಬರ ಹೊಲದಲ್ಲಿನ ಕೊಳವೆಬಾವಿಯ ಕೇಬಲ್ ಕಟ್‌ ಮಾಡಿರುವ ಕಳ್ಳರು</p></div>

ರೈತರೊಬ್ಬರ ಹೊಲದಲ್ಲಿನ ಕೊಳವೆಬಾವಿಯ ಕೇಬಲ್ ಕಟ್‌ ಮಾಡಿರುವ ಕಳ್ಳರು

   

ಹುಲಸೂರ: ಸಾಯಗಾಂವ ಹೋಬಳಿಯಲ್ಲಿ ಬಹುತೇಕ ಕುಟುಂಬಗಳು ಕೃಷಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿವೆ. ಬೆಳೆಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ಕೇಬಲ್ ಕಳ್ಳರ ಕಾಟ ತಲೆನೋವಾಗಿ ಪರಿಣಮಿಸಿದೆ.

ಕಳ್ಳರು ನೀರಾವರಿ ಜಮೀನುಗಳನ್ನು ಗುರಿಯಾಗಿಸಿಕೊಂಡು ವಿದ್ಯುತ್ ತಂತಿ, ಪೈಪ್‌ ಹಾಗೂ ಇತರೆ ಕೃಷಿ ಪರಿಕರಗಳನ್ನು ಕದಿಯುತ್ತಿರುವುದು ಅನ್ನದಾತರ ನಿದ್ದೆಗೆಡಿಸಿದೆ.

ADVERTISEMENT

ಸಾಯಗಾಂವ ಹೋಬಳಿಯ ಹಲಸಿತುಗಾಂವ, ವಾಂಜರಖೇಡ, ಮೆಹಕರ, ಅಟ್ಟರಗಾ, ಅಳವಾಯಿ ಸೇರಿ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡ ಗ್ರಾಮಗಳಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಕೃಷಿ ಮಾಡಲಾಗುತ್ತದೆ. ಕೊಳವೆಬಾವಿ ಹಾಗೂ ಬಾವಿಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದ್ದು, ನೀರು ಹರಿಸಲು ಪೈಪ್‌ಗಳನ್ನು ಬಳಸಲಾಗುತ್ತಿದೆ. ಆದರೆ, ಇದೇ ಪರಿಕರಗಳ ಮೇಲೆ ಕಳ್ಳರ ಕಾಕದೃಷ್ಟಿ ಬಿದ್ದಿದೆ.

ರಾತ್ರಿ, ರೈತರು ಇಲ್ಲದ ವೇಳೆ ಕಳ್ಳರು ಜಮೀನುಗಳಿಗೆ ನುಗ್ಗಿ ವಿದ್ಯುತ್ ಕೇಬಲ್‌ಗಳನ್ನು ಕತ್ತರಿಸುತ್ತಾರೆ. ಪೈಪ್‌, ಮೋಟರ್‌, ಸ್ವಿಚ್‌ಬೋರ್ಡ್‌ ಸೇರಿ ಇತರ ಪರಿಕರಗಳನ್ನು ಕದ್ದೊಯ್ಯುತ್ತಿದ್ದಾರೆ. ಇದರಿಂದ ನೀರಾವರಿ ವ್ಯವಸ್ಥೆಗೆ ತೀವ್ರ ಧಕ್ಕೆಯಾಗಿದ್ದು, ರೈತರು ಅನಿವಾರ್ಯವಾಗಿ ಹೊಸ ಪರಿಕರ ಖರೀದಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

‘ಮೂರು ಎಕರೆ ಜಮೀನಿನಲ್ಲಿ ಕೊಳವೆಬಾವಿ ಮೂಲಕ ಕೃಷಿ ಮಾಡುತ್ತಿದ್ದೇವೆ. ಈಚೆಗೆ ಕಳ್ಳರು ವಿದ್ಯುತ್ ಕೇಬಲ್ ಕದ್ದಿದ್ದಾರೆ. ಅನಿವಾರ್ಯವಾಗಿ ಹೊಸ ಕೇಬಲ್ ಹಾಕಬೇಕಾಯಿತು. ಕಳವಾದ ಪರಿಕರಗಳ ಮೊತ್ತ ₹5 ಸಾವಿರದೊಳಗಿದ್ದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿಲ್ಲ’ ಎಂದು ಹರಿವಾಡಿ ಗ್ರಾಮದ ರೈತ ಪ್ರಭಾಕರ ಪಾಂಚಾಳ ತಿಳಿಸಿದರು.

ದೂರು ನೀಡಿದರೆ ಠಾಣೆಗೆ ಪದೇ ಪದೇ ಅಲೆಬೇಕಾಗುತ್ತದೆ ಎಂಬ ಕಾರಣಕ್ಕೆ ರೈತರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಂಡು ಕಳ್ಳರು ಕಳ್ಳತನ ಮುಂದುವರಿಸುತ್ತಿದ್ದಾರೆ. ಗಸ್ತು ಹೆಚ್ಚಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಅಗತ್ಯ. ಕೇಬಲ್-ಪೈಪ್ ಕಳವಿನಿಂದ ರೈತರು ಬೇಸತ್ತು ರಾತ್ರಿಯಿಡೀ ಮೈಕೊರೆಯುವ ಚಳಿಯಲ್ಲಿಯೂ ಜಮೀನಿನಲ್ಲಿ ವಾಸ ಮಾಡುತ್ತಿದ್ದಾರೆ
ಅಶೋಕ ಪಾಟೀಲ, ಮೆಹಕರ ರೈತ
ಈಚೆಗೆ ಕಳ್ಳರು ನಮ್ಮ ಹೊಲದಲ್ಲಿನ ವಿದ್ಯುತ್ ತಂತಿ-ಪೈಪ್ ಕಳವು ಮಾಡಿದ್ದರು. ಅನಿವಾರ್ಯವಾಗಿ ನಾವು ಹೊಸ ಕೇಬಲ್ ತಂದು ಹಾಕಿದ್ದೇವೆ
ಪ್ರಭಾಕರ ಪಾಂಚಾಳ, ಹರೆವಾಡಿ ಗ್ರಾಮದ ರೈತ
ಕಳವು ನಡೆದಿರುವ ಕುರಿತು ರೈತರು ಠಾಣೆಗೆ ದೂರು ನೀಡಿಲ್ಲ. ದೂರು ನೀಡಿದರೆ ಕಳ್ಳರನ್ನು ಪತ್ತೆ ಹಚ್ಚಲಾಗುವುದು. ಸಂಜೆ ಗಸ್ತು ಹೆಚ್ಚಿಸಲಾಗುವುದು
ಸುದರ್ಶನ ರೆಡ್ಡಿ, ಪಿಎಸ್ಐ ಮೆಹಕರ ಪೊಲೀಸ್ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.