ಬಸವಕಲ್ಯಾಣ: ತಾಲ್ಲೂಕಿನ ಚಂಡಕಾಪುರದ ಸಮೀಪದ ಮಹಾರಾಷ್ಟ್ರದ ಸರಹದ್ದಿನಲ್ಲಿರುವ 1 ಕಿ.ಮೀನಷ್ಟು ಎತ್ತರದ ಗುಡ್ಡದ ಮೇಲಿರುವ ಅಚಲಬೇಟ್ ಗುಹಾಂತರ ದೇವಸ್ಥಾನದಲ್ಲಿ ಸದ್ಗುರು ಕಾಶಿನಾಥ ಮಹಾರಾಜ ಅವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಶುಕ್ರವಾರ ಶ್ರದ್ಧಾ ಭಕ್ತಿ ಮತ್ತು ಸಡಗರ ಸಂಭ್ರಮದಿಂದ ಜರುಗಿತು.
ಮೊದಲ ದಿನ ಪ್ರತಿಷ್ಠಾಪನೆಯ ವಿಧಿ ವಿಧಾನಗಳು, ಹೋಮ ನಡೆದರೆ, ಎರಡನೇ ದಿನ ಮಹಾರಾಜರ ಪಾದುಕಾ ಹಾಗೂ ಪಲ್ಲಕ್ಕಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಹಾರಕೂಡ ಚನ್ನವೀರ ಶಿವಾಚಾರ್ಯರು, ಶ್ರೀಹರಿ ಗುರೂಜಿ, ಜ್ಞಾನೇಶ್ವರ ಗುರೂಜಿ, ಅರುಣ ಅಕಡೆ ಲಾತೂರ ಪಾಲ್ಗೊಂಡಿದ್ದರು.
ಸಂತಶ್ರೇಷ್ಠ ತುಕಾರಾಮ ಮಹಾರಾಜ ಅವರ ವೈಕುಂಠಗಮನ ಮಹೋತ್ಸವ ಮತ್ತು ಈ ಕ್ಷೇತ್ರದ ಹಿಂದಿನ ಅಧಿಪತಿ ಉಜ್ವಲಾನಂದ ಮಹಾರಾಜರ ಪುಣ್ಯತಿಥಿ ಅಂಗವಾಗಿ ವಾರದಿಂದ ಇಲ್ಲಿ ಹರಿನಾಮ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಉಚಿತ ಗುರುಕುಲದ ಉದ್ಘಾಟನೆಯೂ ನಡೆಯಿತು.
ಮೂರ್ತಿ ಪ್ರತಿಷ್ಠಾಪನಾ ಕಾರ್ಯದಲ್ಲಿ ಮಾಕಣಿ ಮಹೇಶ ಮಹಾರಾಜ, ವಿಠಲ್ ಮಹಾರಾಜ ದೇಗಾಂವಕರ್, ಅಷ್ಠಾ ಮಹಂತ ಅವಧೂತ ಪುರಿ ಮಹಾರಾಜ, ಭೀಮ ಮಹಾರಾಜ, ತೇಜಸ್ ಮಹಾರಾಜ, ಮಹಾರಾಷ್ಟ್ರದ ಉಮರ್ಗಾ ಶಾಸಕ ಪ್ರವೀಣ ಸ್ವಾಮಿ, ಔಸಾ ಶಾಸಕ ಅಭಿಮನ್ಯು ಪವಾರ, ಉಸ್ಮಾನಾಬಾದ್ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ವಸಂತರಾವ್ ನಾಗದೆ, ಮುಖಂಡ ಪ್ರಕಾಶ ಆಷ್ಟೇ ಉಪಸ್ಥಿತರಿದ್ದರು. ಅನಿಲ ದೇವಾ ಮಹಾರಾಜ ಅವರು ಶಾಸ್ತ್ರೋಕ್ತ ಪದ್ಧತಿಯಿಂದ ಹೋಮ ನಡೆಸಿದರು.
ನಂತರದಲ್ಲಿ ವಿಶೇಷವಾಗಿ ಸಿಂಗರಿಸಿದ ರಥ, ಭಜನಾ ತಂಡಗಳು ಹಾಗೂ ವಾದ್ಯ ಮೇಳಗಳೊಂದಿಗೆ ದೇವಸ್ಥಾನದ ಸುತ್ತಲಿನಲ್ಲಿ ಪರಿಕ್ರಮಾ ನಡೆಸಿ ಮೆರವಣಿಗೆ ಮಾಡಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಪ್ರತಿದಿನ ಗಾಥಾ ಪಾರಾಯಣ, ಪ್ರವಚನ, ಹರಿಪಾಠ, ಕೀರ್ತನೆ, ಅನ್ನ ಸಂತರ್ಪಣೆ, ಸಂಗೀತ ಭಜನೆ ಕಾರ್ಯಕ್ರಮಗಳು ಜರುಗಿವೆ. ಏಪ್ರಿಲ್ 5 ರಂದು ಶ್ರೀಹರಿ ಗುರೂಜಿ ಲವಟೆ ನೇತೃತ್ವದಲ್ಲಿ ಹರಿನಾಮ ಸಪ್ತಾಹ ಸಮಾರೋಪ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.