ಬೀದರ್: ಹಿರಿಯ ಚಿತ್ರ ಕಲಾವಿದ ಸಿ.ಬಿ. ಸೋಮಶೆಟ್ಟಿ ಅವರು ಬಿಡಿಸಿರುವ ಬಸವಣ್ಣನ ಜೀವನದ ಮೇಲೆ ಬೆಳಕು ಚೆಲ್ಲುವ ಕಲಾಕೃತಿಗಳನ್ನು ಒಳಗೊಂಡಿರುವ ‘ಆರ್ಟ್ ಗ್ಯಾಲರಿ’ ಉದ್ಘಾಟನಾ ಸಮಾರಂಭ ಹಾಗೂ ಅವರ ‘ಶ್ರೀ ಗುರುಬಸವ ಚಿತ್ರಚರಿತ’ ಚಿತ್ರ ಸಂಪುಟ ಬಿಡುಗಡೆ ಸಮಾರಂಭ ಇಲ್ಲಿನ ಬಸವ ನಗರದಲ್ಲಿ ಭಾನುವಾರ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ‘ಆರ್ಟ್ ಗ್ಯಾಲರಿ’ ಉದ್ಘಾಟಿಸಿದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಅವರು ಚಿತ್ರ ಸಂಪುಟ ಬಿಡುಗಡೆಗೊಳಿಸಿದರು.
ಸಿ.ಬಿ. ಸೋಮಶೆಟ್ಟಿ ಹಾಗೂ ಅವರ ಕಲಾಕೃತಿಗಳ ಕುರಿತು ಮಾತನಾಡಿದ ಬೈಲೂರ ನಿಷ್ಕಲ ಮಂಟಪದ ನಿಜಗುಣ ಪ್ರಭು ಸ್ವಾಮೀಜಿ, ಚಿತ್ರಗಳು ಮತ್ತು ಸಂಕೇತಗಳಿಂದ ಇತಿಹಾಸ, ನಮ್ಮ ಪರಂಪರೆ, ಪೂರ್ವಜರ ಬಗ್ಗೆ ತಿಳಿದುಕೊಂಡಿದ್ದೇವೆ. ಕಲೆಯ ಮೂಲಕ ಜಗತ್ತಿನ ಚರಿತ್ರೆ ಎಲ್ಲರಿಗೆ ಗೊತ್ತಾಗಿದೆ. ಹೀಗಾಗಿಯೇ ಕಲಾಕೃತಿಗಳು ಮತ್ತು ಸಂಕೇತಗಳಿಗೆ ಈಗಲೂ ವಿಶೇಷ ಮಹತ್ವ ಇದೆ. ಅಂತಹ ಮಹಾನ್ ಕಲಾಕೃತಿಗಳ ಮೂಲಕ 12ನೇ ಶತಮಾನದ ಸಮಾಜ ಸುಧಾಕರ ಬಸವಣ್ಣನವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೆಲಸ ಕಲಾವಿದ ಸಿ.ಬಿ. ಸೋಮಶೆಟ್ಟಿ ಅವರು ಮಾಡಿದ್ದಾರೆ. ಅವರ ಕೆಲಸ ಬಹಳ ಶ್ರೇಷ್ಠವಾದುದು ಎಂದರು.
ಕಲಾವಿದ ಬ್ರಹ್ಮಚಿಟ್ಟಿ ಅವರು ಬಸವಣ್ಣನವರ ಬಗ್ಗೆ ವೈವಿಧ್ಯಮಯವಾದ ಚಿತ್ರಗಳನ್ನು ಬಿಡಿಸಿದ್ದಾರೆ. ಅಂತಹವರ ಸಾಲಿಗೆ ಸೋಮಶೆಟ್ಟಿ ಅವರು ಸೇರಿದ್ದಾರೆ. ತಮ್ಮ ವೈಯಕ್ತಿಕ ಸುಖವನ್ನು ತ್ಯಜಿಸಿ, ಶಿಕ್ಷಕ ವೃತ್ತಿಯಿಂದ ಗಳಿಸಿದ ₹40 ಲಕ್ಷವನ್ನು ವಿನಿಯೋಗಿಸಿ, 17 ವರ್ಷ ತಪಸ್ಸಿನಂತೆ ಕೆಲಸ ಮಾಡಿ ಬಸವಣ್ಣನ ಜನ್ಮದಿಂದ ಲಿಂಗೈಕ್ಯರಾಗುವ ಅವಧಿಯ ಪ್ರಮುಖ ಘಟ್ಟಗಳನ್ನು ಚಿತ್ರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಜಲವರ್ಣದ ಕಲಾಕೃತಿಗಳನ್ನು ನೋಡುತ್ತಿದ್ದರೆ 12ನೇ ಶತಮಾನದ ಘಟನಾವಳಿಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ ಎಂದರು.
ಈ ಜಗತ್ತಿನಲ್ಲಿ ಗೌತಮ ಬುದ್ಧ, ಏಸು ಕ್ರಿಸ್ತ, ಭಗವಾನ ಮಹಾವೀರ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಅಕ್ಕಮಹಾದೇವಿ, ಸಾವಿತ್ರಿಬಾಯಿ ಫುಲೆ ಅವರ ಚಿತ್ರಗಳ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಸಾರಿವೆ. ಸೋಮಶೆಟ್ಟಿ ಅವರ ಕಲಾಕೃತಿಗಳಲ್ಲಿ ತನು, ಮನ, ಭಾವ ಇದೆ. ಯಾವುದೇ ಪ್ರಶಸ್ತಿ, ಸನ್ಮಾನಕ್ಕಾಗಿ ಅವರು ಈ ಕೆಲಸ ಮಾಡಿಲ್ಲ. ಬಸವಣ್ಣನವರ ಸಾಮಾಜಿಕ ನ್ಯಾಯದ ತತ್ವಗಳು ಜನಮನಕ್ಕೆ ತಲುಪಲಿ ಎಂಬ ಮಹದುದ್ದೇಶ ಇದರಲ್ಲಿದೆ ಎಂದು ತಿಳಿಸಿದರು.
ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಕಲಾವಿದ ಸೋಮಶೆಟ್ಟಿ ಅವರ ಕಲಾಸೇವೆ ಬಹಳ ಅನನ್ಯ. ಇವರ ಕೊಡುಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಸಮಾಜಕ್ಕೆ ಅವರು ದೊಡ್ಡ ಕೊಡುಗೆ ಕೊಟ್ಟಿದ್ದು, ಸಮಾಜ ಕೂಡ ಅವರನ್ನು ಗೌರವಿಸಬೇಕು ಎಂದರು.
ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, ವಚನ ಸಾಹಿತ್ಯದ ಮೂಲಕ ಸಾಮಾಜಿಕ ನ್ಯಾಯ ಕೊಟ್ಟವರು ಬಸವಾದಿ ಶರಣರು. ಈಗಲೂ ಅದನ್ನು ನೆನಪು ಮಾಡಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅಂತಹ ಕೆಲಸ ಸಿ.ಬಿ. ಸೋಮಶೆಟ್ಟಿ ಮಾಡಿದ್ದಾರೆ ಎಂದು ಹೇಳಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ, ಗ್ರಂಥದ ಲೇಖಕರಾದ ಬಸವಕಲ್ಯಾಣದ ಗಾಯತ್ರಿ ತಾಯಿ, ಗಂಗಾಧರ ದೇವರು, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಕಾಶ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಷ್ಣುಸಿಂಗ್ ಠಾಕೂರ್, ಬಸವರಾಜ ಧನ್ನೂರ, ಅರುಣಕುಮಾರ ಹೊತಪೇಟೆ, ಸಿದ್ರಾಮಪ್ಪ ಮಾಸಿಮಾಡೆ, ಕಲಾವಿದ ಎ.ಎಸ್. ಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಲಿಂಗಾರತಿ ನಾವದಗೇರೆ, ಶಿವಲಿಂಗ ಎರ್ಗಲ, ಚನ್ನಬಸಪ್ಪ ನೌಬಾದೆ, ಶರಣಪ್ಪ ಮಿಠಾರೆ, ರೇವಣಪ್ಪ ಮೂಲಗೆ, ಅಲ್ಲಮಪ್ರಭು ನಾವದಗೇರೆ, ವಿಜಯಕುಮಾರ ಸೋನಾರೆ, ವಿನಯ್ ಕುಮಾರ್ ಮಾಳಗೆ, ಸುನೀಲ ಪಾಟೀಲ ಗಾದಗಿ, ಉಮೇಶ ಅಷ್ಟೂರೆ, ಬಸವರಾಜ ಅನಗವಾಡಿ, ಕಂಟೆಪ್ಪ ಗಂದಿಗುಡಿ ಮತ್ತಿತರರು ಇದ್ದರು.
ಶಾಸಕ ಬೆಲ್ದಾಳೆ ಧನ್ನೂರ ತಲಾ ₹50 ಸಾವಿರ
‘ಲಿಂಗಾನಂದ ಶ್ರೀ ಪ್ರಶಸ್ತಿ ಘೋಷಣೆ’ ‘ಬಸವ ಧರ್ಮ ಪೀಠದ ಸಂಸ್ಥಾಪಕ ಪೀಠಾಧಿಪತಿ ಲಿಂಗಾನಂದ ಸ್ವಾಮೀಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ಲಿಂಗಾನಂದ ಶ್ರೀ’ ವಾರ್ಷಿಕ ಪ್ರಶಸ್ತಿಗೆ ಕಲಾವಿದ ಸಿ.ಬಿ. ಸೋಮಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದ್ದು ₹51 ಸಾವಿರ ನಗದು ಪ್ರಶಸ್ತಿ ಪತ್ರ ಕೊಟ್ಟು ಸನ್ಮಾನಿಸಲಾಗುವುದು’ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣ ಪ್ರಭು ಸ್ವಾಮೀಜಿ ಘೋಷಿಸಿದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ₹50 ಸಾವಿರ ನೀಡುವುದಾಗಿ ಘೋಷಿಸಿದರೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಅವರು ಸಿ.ಬಿ. ಸೋಮಶೆಟ್ಟಿ ಅವರಿಗೆ ₹50 ಸಾವಿರ ಮೊತ್ತದ ಚೆಕ್ ನೀಡಿದರು.
‘ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸು’
‘ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಸಮಗ್ರ ವ್ಯಕ್ತಿತ್ವವನ್ನು ಕಲಾಕೃತಿಗಳಲ್ಲಿ ಕಟ್ಟಿ ಅದಕ್ಕಾಗಿ ಗ್ಯಾಲರಿ ನಿರ್ಮಿಸಿರುವ ಹಿರಿಯ ಚಿತ್ರ ಕಲಾವಿದ ಸಿ.ಬಿ. ಸೋಮಶೆಟ್ಟಿ ಅವರ ಕಲಾ ಸೇವೆ ಅಮೋಘವಾದುದು. ಇದಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಿಫಾರಸು ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಆಶ್ವಾಸನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.