ಬೀದರ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚನಶೆಟ್ಟಿ ಪರ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು, ಸಾಹಿತಿಗಳು ಹಾಗೂ ಲೇಖಕರು ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ಪ್ರತಾಪನಗರ, ನೌಬಾದ್, ಯಲ್ಲಾಲಿಂಗ ಕಾಲೊನಿಗಳಲ್ಲಿ ಸದಸ್ಯರ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು.
ಐದು ವರ್ಷಗಳ ಅವಧಿಯಲ್ಲಿ ಗಡಿ ಜಿಲ್ಲೆಯಲ್ಲಿ ಕನ್ನಡಮಯ ವಾತಾವರಣ ನಿರ್ಮಿಸುವಲ್ಲಿ ಸುರೇಶ ಚನಶೆಟ್ಟಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕಸ್ತೂರಿ ಪಟಪಳ್ಳಿ ಹೇಳಿದರು.
ಜಿಲ್ಲಾ, ತಾಲ್ಲೂಕು, ವಲಯ, ಗ್ರಾಮ ಮಟ್ಟದ ಸಮ್ಮೇಳನ, ಮನೆಯಂಗಳದಲ್ಲಿ ಮಾತುಕತೆ ಮೊದಲಾದ ಕಾರ್ಯಕ್ರಮಗಳ ಮೂಲಕ ಪ್ರತಿಭಾವಂತ ಸಾಹಿತಿಗಳಿಗೆ ವೇದಿಕೆ ಒದಗಿಸಿದ್ದಾರೆ. ಸಾಹಿತ್ತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕೆಲಸ ನಿರಂತರ ಮಾಡಿದ್ದಾರೆ ಎಂದು ತಿಳಿಸಿದರು.
ಸುರೇಶ ಅವರ ಅವಧಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ನೂತನ ಕನ್ನಡ ಭವನ ನಿರ್ಮಾಣ ಶುರುವಾಗಿದೆ. ಭವನವನ್ನು ರಾಜ್ಯದಲ್ಲೇ ಮಾದರಿಯಾಗಿ ನಿರ್ಮಿಸಲು ಅವರಿಗೆ ಮತ್ತೊಂದು ಅವಧಿಗೆ ಅವಕಾಶ ಕಲ್ಪಿಸಬೇಕು ಎಂದು ಸಾಹಿತಿ ವಿದ್ಯಾವತಿ ಬಲ್ಲೂರ ಮನವಿ ಮಾಡಿದರು.
ಜಿಲ್ಲೆಯ ಸಾಹಿತಿಗಳು, ಕನ್ನಡಾಭಿಮಾನಿಗಳು, ಪರಿಷತ್ನ ಬಹುತೇಕ ಸದಸ್ಯರು ಸುರೇಶ ಅವರೊಂದಿಗೆ ಇದ್ದಾರೆ. ಎಲ್ಲೆಡೆ ಅವರ ಪರವಾದ ಅಲೆ ಕಂಡು ಬರುತ್ತಿದೆ. ಅವರ ಗೆಲುವು ನಿಶ್ಚಿತವಾಗಿದೆ ಎಂದು ನುಡಿದರು.
ಪ್ರಮುಖರಾದ ಕಲ್ಯಾಣರಾವ್ ಚಳಕಾಪುರೆ, ಡಾ. ರಾಜಕುಮಾರ ಅಲ್ಲೂರೆ, ಟಿ.ಎಂ. ಮಚ್ಚೆ, ಡಾ. ಬಂಡಯ್ಯ ಸ್ವಾಮಿ, ಸುನೀಲ್ ಬೀದೆ, ಮಹೇಶ ಬಿರಾದಾರ, ಆನಂದ ಪಾಟೀಲ, ಸುರೇಶ ಗೌರೆ, ಸಂಗಮೇಶ್ವರ ಜ್ಯಾಂತೆ, ಸಿದ್ಧಾರೂಢ ಭಾಲ್ಕೆ, ಸಾಕ್ಷಿ ಬಿರಾದಾರ, ಸಂಗೀತಾ ಶೆಟಕಾರ್, ನಾಗೇಶ ಮಡಿವಾಳ, ಸಂಧ್ಯಾರಾಣಿ ಮುತ್ತಂಗೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.