ADVERTISEMENT

ಸಾಹಿತಿಗಳ ಮನೆ ಬಾಗಿಲಿಗೆ ಪರಿಷತ್ ಒಯ್ದ ಚನಶೆಟ್ಟಿ

ಪ್ರಚಾರ ಸಭೆಯಲ್ಲಿ ಹಿರಿಯ ಸಾಹಿತಿ ಶಿವಕುಮಾರ ನಾಗವಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:15 IST
Last Updated 21 ಏಪ್ರಿಲ್ 2021, 16:15 IST
ಬೀದರ್‌ನ ಕೃಷಿ ನಗರದ ಹನುಮಾನ ಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಜಾರಾಮ ಚಿಟ್ಟಾ, ಶಿವಕುಮಾರ ನಾಗವಾರ, ಶಿವಮೂರ್ತಿ ಬಟನಾಪುರೆ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚನಶೆಟ್ಟಿ ಇದ್ದರು
ಬೀದರ್‌ನ ಕೃಷಿ ನಗರದ ಹನುಮಾನ ಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಜಾರಾಮ ಚಿಟ್ಟಾ, ಶಿವಕುಮಾರ ನಾಗವಾರ, ಶಿವಮೂರ್ತಿ ಬಟನಾಪುರೆ, ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚನಶೆಟ್ಟಿ ಇದ್ದರು   

ಬೀದರ್: ‘ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತಿಗಳ ಮನೆ ಬಾಗಿಲಿಗೇ ಒಯ್ದ ಶ್ರೇಯಸ್ಸು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರಿಗೆ ಸಲ್ಲುತ್ತದೆ’ ಎಂದು ಹಿರಿಯ ಸಾಹಿತಿ ಶಿವಕುಮಾರ ನಾಗವಾರ ಅಭಿಪ್ರಾಯಪಟ್ಟರು.

ನಗರದ ಸಂಗಮೇಶ್ವರ ನಗರ ಹಾಗೂ ಕೃಷಿ ನಗರದ ಹನುಮಾನ ಮಂದಿರದಲ್ಲಿ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯೂ ಆದ ಸುರೇಶ ಚನಶೆಟ್ಟಿ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಎಲೆಮರೆ ಕಾಯಿಯಂತಿದ್ದ ಜಿಲ್ಲೆಯ ಅನೇಕ ಸಾಹಿತಿಗಳಿಗೆ ವೇದಿಕೆ ಕಲ್ಪಿಸಿದ್ದಾರೆ. ಬಹು ದಿನಗಳ ಕನಸಾಗಿದ್ದ ಕನ್ನಡ ಭವನದ ಕಾಮಗಾರಿಗೆ ಚಾಲನೆ ಕೊಟ್ಟಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಕನ್ನಡದ ಬೆಳವಣಿಗೆಗೆ ಮತದಾರರು ಅವರನ್ನು ಬೆಂಬಲಿಸಬೇಕು’ ಎಂದು ಹೇಳಿದರು.

ADVERTISEMENT

‘ಚನಶೆಟ್ಟಿ ಅವರಿಗೆ ಕನ್ನಡದ ಬಗ್ಗೆ ಅಪಾರ ಕಾಳಜಿ ಇದೆ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಕೂಗು ಕೇಳಿ ಬಂದಾಗ, ಅದಕ್ಕೆ ಅವಕಾಶ ಕೊಡದಂತೆ ಶಿಕ್ಷಣ ಇಲಾಖೆ ಮೇಲೆ ನಿರಂತರ ಒತ್ತಡ ಹೇರಿದ್ದರು’ ಎಂದು ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ನುಡಿದರು.

‘ಸನ್ಮಾನ ಕಾರ್ಯಕ್ರಮದ ಮೂಲಕ ಕನ್ನಡ ಮಾಧ್ಯಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘ಸುರೇಶ ಉತ್ತಮ ಸಂಘಟಕರಾಗಿದ್ದಾರೆ. ದೂರದೃಷ್ಟಿ ಹೊಂದಿದ್ದಾರೆ. ಇನ್ನೊಂದು ಅವಧಿಗೆ ಅವಕಾಶ ನೀಡಿದರೆ ಇನ್ನೂ ಉತ್ತಮ ರೀತಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನುಡಿದರು.

ಸುರೇಶ ಚನಶೆಟ್ಟಿ, ಎನ್‍ಜಿಒ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಬಾಲಾಜಿ ಬಿರಾದಾರ, ನಗರಸಭೆ ಸದಸ್ಯರಾಗಿ ಪುನರಾಯ್ಕೆಯಾದ ರಾಜಾರಾಮ ಚಿಟ್ಟಾ, ಪ್ರಮುಖರಾದ ಶಿವಮೂರ್ತಿ ಬಟನಾಪುರೆ, ವಿಜಯಕುಮಾರ ಸೋನಾರೆ ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಬಸವರಾಜ ಜಕ್ಕಾ, ರಾಜಶೇಖರ ಮಂಗಲಗಿ, ಶಿವರಾಜ ಕಣಜೆ, ಬಳವಂತರಾವ್ ಪಾಂಡ್ರೆ, ರಾಘವೇಂದ್ರ ಕುಲಕರ್ಣಿ, ಶಿವಾನಂದ ಪಾಟೀಲ, ಸಿದ್ಧಾರೂಢ ಕಂದಗೂಳೆ, ರಾಜೇಂದ್ರ ಮಣಗೇರಿ, ಸಿದ್ಧಾರೆಡ್ಡಿ ನಾಗೋರಾ, ದಿಲೀಪ್ ಮಂಗಳೂರೆ, ರಾಜಪ್ಪ ಸ್ವಾಮಿ, ಬಾಪು ಮಡಕಿ, ಚನ್ನಪ್ಪ ಸಂಗೋಳಗಿ, ವೀರಪ್ಪ ಜೀರಗೆ, ಬಸವರಾಜ ಯಾಕತಪುರೆ, ಸುಭಾಷ ಸಿರಂಜೆ, ಗುರನಾಥ ರಾಜಗೀರಾ, ರಮೇಶ ಬಿರಾದಾರ, ಸುನೀಲ್ ಭಾವಿಕಟ್ಟಿ, ಶಂಕರ ಚೊಂಡಿ ಇದ್ದರು. ಶಿವಪುತ್ರ ಪಾಟೀಲ ಸ್ವಾಗತಿಸಿದರು. ಹಾವಯ್ಯ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.