ADVERTISEMENT

ಬೀದರ್‌| ಶಿವಾಜಿ ಹಿಂದೂ ಸಮಾಜದ ಶ್ರೇಷ್ಠ ರತ್ನ: ಸತೀಶ್‌ ಪಾಟೀಲ್

ಛತ್ರಪತಿ ಶಿವಾಜಿ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:12 IST
Last Updated 11 ಫೆಬ್ರುವರಿ 2026, 6:12 IST
ಬೀದರ್‌ನಲ್ಲಿ ಮಂಗಳವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಸಮಾರೋಪದಲ್ಲಿ ಮಾತನಾಡಿದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತೀಶ್‌ ಪಾಟೀಲ್‌ ಮಾತನಾಡಿದರು
ಬೀದರ್‌ನಲ್ಲಿ ಮಂಗಳವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಸಮಾರೋಪದಲ್ಲಿ ಮಾತನಾಡಿದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತೀಶ್‌ ಪಾಟೀಲ್‌ ಮಾತನಾಡಿದರು   

ಬೀದರ್‌: ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆಗಳ ವಿಜ್ಞಾನ ವಿಶ್ವವಿದ್ಯಾಲಯ ಬೀದರ್‌ ಹಾಗೂ ಕರ್ನಾಟಕ ಕಾಲೇಜಿನ ಇತಿಹಾಸ ವಿಭಾಗದ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಯುವ ನಾಯಕತ್ವಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಜೀವನ ದರ್ಶನ’ ಕುರಿತ ಎರಡು ದಿನಗಳ ಬಹುಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮಂಗಳವಾರ ವಿಧ್ಯುಕ್ತ ತೆರೆ ಬಿತ್ತು.

ಸಮಾರೋಪದಲ್ಲಿ ಮಾತನಾಡಿದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತೀಶ್‌ ಪಾಟೀಲ್‌, ಮಹಾರಾಷ್ಟ್ರದ ಶಿವನೇರಿ ಕೋಟೆಯಲ್ಲಿ ಜನಿಸಿದ ಶಿವಾಜಿ ಮಹಾರಾಜರು ಹಿಂದೂ ಸಮಾಜದ ಶ್ರೇಷ್ಠ, ಅನರ್ಘ್ಯ ರತ್ನ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಕಾಳಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗುರುಪ್ರಕಾಶ್‌ ಹೂಗಾರ ವಿಶೇಷ ಉಪನ್ಯಾಸ ನೀಡಿ, ಶಿವಾಜಿ ಧೈರ್ಯ, ಬಸವಣ್ಣನವರ ಜ್ಞಾನ, ಬುದ್ಧನ ಶಾಂತಿ, ಏಸು ಕ್ರಿಸ್ತರ ತಾಳ್ಮೆ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.

ADVERTISEMENT

ಪರಿವರ್ತನ ಪಿಯು ಕಾಲೇಜಿನ ಅಧ್ಯಕ್ಷ ವೆಂಕಟೇಶ ಮೈಂದೆ, ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಪ್ರೊ. ಸೋಮನಾಥ ಬಿರಾದಾರ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ, ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಬಿ.ವಿ.ಭೂಮರಡ್ಡಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಶಿವಲೀಲಾ ಮಠಪತಿ, ಔರಾದ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂಜೀವಕುಮಾರ ತಾಂದಳೆ ಮತ್ತಿತರರು ಇದ್ದರು.

ಕತ್ತಲೆ ನಡುವಿನ ಮಿಂಚಿದ ಕಿರಣ

ಯುವ ಮನಸುಗಳಿಗೆ ಸಂಸ್ಕೃತಿಯ ದಿಕ್ಕು ತೋರಿದ ಧೀಮಂತ ನಾಯಕ ಛತ್ರಪತಿ ಶಿವಾಜಿ ಮಹಾರಾಜರು ಕತ್ತಲೆಯ ನಡುವೆ ಮಿಂಚಿದ ಕಿರಣ ಎಂದು ನೌಬಾದ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಸುಮನಬಾಯಿ ಶಿಂಧೆ ತಿಳಿಸಿದರು. ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ ಬೆಂಗಳೂರು ಕರ್ನಾಟಕ ಸಾಹಿತ್ಯ ಸಂಘ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯ ಬೀದರ್‌ ಹಾಗೂ ಕರ್ನಾಟಕ ಕಾಲೇಜಿ ಇತಿಹಾಸ ವಿಭಾಗದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ‘ಯುವ ನಾಯಕತ್ವಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಜೀವನ ದರ್ಶನ’ ಎಂಬ ವಿಷಯದ ಮೇಲೆ ಆಯೋಜಿಸಿದ ಬಹುಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಯುವಕರಿಗೆ ಶಿವಾಜಿ ಹೇಗೆ ಮಾದರಿ?’ ಕುರಿತ ಗೋಷ್ಠಿ-2 ರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಒಬ್ಬ ಅರಸನಿಗೆ ಇರಬೇಕಾದ ಧೈರ್ಯ ಸ್ಥೈರ್ಯ ಅವರಲ್ಲಿತ್ತು. ಸೈನಿಕರಲ್ಲಿ ಆತ್ಮವಿಶ್ವಾಸ ತುಂಬಿ ಯುದ್ಧಗಳನ್ನು ಗೆಲ್ಲುತಿದ್ದರು. ಇಂದಿನ ಕಾಲದಲ್ಲಿ ತಾಯಂದಿರು ಮಕ್ಕಳಿಗೆ ಧೈರ್ಯ ಶೌರ್ಯದ ಮತ್ತು ವ್ಯಕ್ತಿತ್ವ ವಿಕಸನವಾಗುವ ಕಥೆಗಳು ಹೇಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಕಲಬುರಗಿ ವಿ.ಜಿ. ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಸುಭಾಷಚಂದ್ರ ದೊಡಮನಿ ಉಪಸ್ಥಿತರಿದ್ದರು. ಬಿ.ವಿ.ಭೂಮರೆಡ್ಡಿ ಕಾಲೇಜಿನ ಪ್ರಾಧ್ಯಾಪಕ ಬಸವರಾಜ ಬಿರಾದಾರ ಸ್ವಾಗತಿಸಿ ನಿರೂಪಿಸಿದರು. ‌ ಪದ್ಮಿನಿ ಕಾಜಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.