ಚಿಟಗುಪ್ಪ: `ಪಾಲಕರು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಬೇಕು. ಅವರಲ್ಲಿ ದೇಶ ಸೇವೆಯ ಅರಿವು ಮೂಡಿಸಬೇಕು. ಜನರು ದೇಶ ಸೇವೆಗೆ ಆದ್ಯತೆ ನೀಡಬೇಕು’ ಎಂದು ನ್ಯಾಯಾಧೀಶ ವಿಜಯಕುಮಾರ ಜಟ್ಲಾ ಹೇಳಿದರು.
ಪಟ್ಟಣದಲ್ಲಿ ಶನಿವಾರ ಗೆಳೆಯರ ಒಕ್ಕೂಟದಿಂದ ಯುದ್ಧವೀರ ಪ್ರಶಸ್ತಿ ಪುರಸ್ಕೃತ ವಿನೋದ ಸಿರ್ಕೆ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಷ್ಟ್ರ ರಕ್ಷಣೆ ಎಲ್ಲರ ಹೊಣೆಯಾಗಿದ್ದು, ದೇಶಾಭಿಮಾನ ಬಗ್ಗೆ ಎಲ್ಲರಲ್ಲಿ ಹುಟ್ಟಬೇಕು ಎಂದರು.ಸಾಹಿತಿ ವಿ.ಎನ್.ಮಠಪತಿ ಉಪನ್ಯಾಸ ನೀಡಿದರು.
ಯೋಧ ವಿನೋದ ಸಿರ್ಕೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಯೋಧರಲ್ಲಿ ಜಾತಿ-ಮತ ಎಂಬ ಬೇಧ ಭಾವ ಇರುವುದಿಲ್ಲ, ಎಲ್ಲರ ರಕ್ಷಣೆ ನಮ್ಮ ಆದ್ಯತೆ, ದೇಶದ ನಾಗರಿಕರು ಒಗ್ಗಟ್ಟಾಗಿ ಬದುಕಬೇಕು. ಕೋಮು,
ವೈಷಮ್ಯಗಳಿಗೆ ಅವಕಾಶ ನೀಡಬಾರದು. ಅಖಂಡ ಭಾರತ ನಮ್ಮ ಗುರಿಯಾಗಬೇಕು. ದೇಶದ ಭದ್ರತೆ ವಿಷಯದಲ್ಲಿ ಎಲ್ಲರೂ ಒಂದಾಗಬೇಕು’ ಎಂದು ನುಡಿದರು.
ವೃತ್ತ ನಿರೀಕ್ಷಕ ಶರಣಬಸವೇಶ್ವರ ಭಜಂತ್ರಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುರೇಶ್ ಭಾವಿಮನಿ, ವೈದ್ಯ ರಾಜಶೇಖರ ಕೋರವಾರ್, ವಿಜಯಕುಮಾರ ಚಿಟಗುಪ್ಪಿಕರ್, ವೀರಣ್ಣ ಕಾಳಗಿ, ಪಿಕೆಪಿಎಸ್ ಅಧ್ಯಕ್ಷ ಮೊಹ್ಮದ್ ಇಸ್ಮಾಯಲ್ ರಾಠೋಡಿ, ಮುಜಾಫರ ಪಟೇಲ್, ಜಾವೇದ ಹಕಿಮ್, ಭಗವಂತರಾವ್ ಸಿರ್ಕೆ ಇದ್ದರು. ಅನಿಲ ಸಿಂಧೆ ನಿರೂಪಿಸಿದರು.
ಆರಂಭದಲ್ಲಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ವಿನೋದ ಸಿರ್ಕೆ ಅವರಿಗೆ ಮೆರವಣಿಗೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.