
ಬೀದರ್: ಬೀದರ್ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಜಿಲ್ಲೆಯಾದ್ಯಂತ ಮೈನಡುಗುವ ಚಳಿಯಿದೆ.
ಚಳಿಯ ಜೊತೆಗೆ ಮಂಜಿನ ಪ್ರಮಾಣ ಕೂಡ ಹೆಚ್ಚಾಗಿದ್ದು, ಸಂಜೆ 5.30ಕ್ಕೆಲ್ಲ ಬೆಳಕು ಮರೆಯಾಗಿ ಕತ್ತಲಾಗುತ್ತಿದೆ. ಬೆಳಿಗ್ಗೆ 7ರಿಂದ 8ರ ವರೆಗೆ ಮಂಜು ಇರುತ್ತಿದೆ. ತಾಪಮಾನ ಕುಸಿದು ಚಳಿ ಹೆಚ್ಚಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಿಂದೆಲ್ಲ ಬೆಳಿಗ್ಗೆ ಐದು ಗಂಟೆಗೆ ನಗರದ ಕ್ರೀಡಾಂಗಣಗಳು, ಉದ್ಯಾನಗಳು ಜನರಿಂದ ಭರ್ತಿಯಾಗುತ್ತಿದ್ದವು. ಸಂಜೆ 7ರ ಬಳಿಕವೂ ಜನ ಇರುತ್ತಿದ್ದರು. ಈಗ ಬೆಳಿಗ್ಗೆ 7ಗಂಟೆಯ ನಂತರವೇ ಜನ ಕ್ರೀಡಾಂಗಣಗಳಿಗೆ ಬರುತ್ತಿದ್ದಾರೆ. ಸಂಜೆ ಆರು ಗಂಟೆಯೊಳಗೆ ಮನೆ ಸೇರುತ್ತಿದ್ದಾರೆ. ಪ್ರತಿಯೊಬ್ಬರೂ ಸ್ವೆಟರ್, ಮಫ್ಲರ್, ಜಾಕೆಟ್ ಧರಿಸಿಕೊಂಡು ಓಡಾಡುವುದು ಸಾಮಾನ್ಯವಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಇನ್ನೊಂದು ವಾರ ಕನಿಷ್ಠ ತಾಪಮಾನ 7ರಿಂದ 8 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದ್ದು, ಚಳಿ ಯಥಾಸ್ಥಿತಿ ಇರಲಿದೆ. ಇನ್ನು, ಗರಿಷ್ಠ ತಾಪಮಾನ 27ರಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ.
ಚಳಿಯ ಪ್ರಮಾಣ ಹೆಚ್ಚಾಗಿರುವ ಕಾರಣ ಜನರು ನಸುಕಿನ ಜಾವ, ಸಂಜೆ 7 ಗಂಟೆಯ ನಂತರ ಹೊರಾಂಗಣದಲ್ಲಿ ಓಡಾಡುವುದು ನಿಲ್ಲಿಸಬೇಕು. ದೇಹ ಬೆಚ್ಚಗಿರುವ ಉಡುಪುಗಳನ್ನು ಧರಿಸಬೇಕು. ಬಿಸಿಯಾದ ಆಹಾರ ಸೇವಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು, ಸೂಪ್, ದ್ರವ ಆಹಾರ ಸೇವಿಸಬೇಕೆಂದು ವೈದ್ಯರು ಸಲಹೆ ಮಾಡಿದ್ದಾರೆ. ಅದರಲ್ಲೂ ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿಯರು ಹೆಚ್ಚಿನ ಎಚ್ಚರ ವಹಿಸಲು ಸಲಹೆ ಮಾಡಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.