ADVERTISEMENT

ಕೋವಿಡ್‍ಗೆ ಮನೆಯಲ್ಲೇ ಚಿಕಿತ್ಸೆ

ಇ-–ಸಂಜೀವಿನಿ ಯೋಜನೆ ಬಳಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 6:51 IST
Last Updated 1 ಮೇ 2021, 6:51 IST
ಇ-ಸಂಜೀವಿನಿ ಯೋಜನೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಮಹೇಶ ಬಿರಾದಾರ ಅವರು ಔರಾದ್ ತಾಲ್ಲೂಕಿನ ಕೌಠಾ ಗ್ರಾಮದಲ್ಲಿ ಜನರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವ ವಿಧಾನ ಹೇಳಿಕೊಟ್ಟರು
ಇ-ಸಂಜೀವಿನಿ ಯೋಜನೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಮಹೇಶ ಬಿರಾದಾರ ಅವರು ಔರಾದ್ ತಾಲ್ಲೂಕಿನ ಕೌಠಾ ಗ್ರಾಮದಲ್ಲಿ ಜನರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವ ವಿಧಾನ ಹೇಳಿಕೊಟ್ಟರು   

ಔರಾದ್: ಜ್ವರ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳಿಗೆ ಜನ ಆಸ್ಪತ್ರೆಗಳಿಗೆ ಅಲೆಯುವುದನ್ನು ತಪ್ಪಿಸಲು ಇ-ಸಂಜೀವಿನಿ ಯೋಜನೆ ಲಾಭ ಪಡೆದುಕೊಳ್ಳುವಂತೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಮಹೇಶ ಬಿರಾದಾರ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಕೋವಿಡ್‌ ಪ್ರಕರಣಗಳು ಜಾಸ್ತಿಯಾಗುತ್ತಿರುವ ಕಾರಣ ಆಸ್ಪತ್ರೆಗಳ ಮೇಲಿನ ಒತ್ತಡ ತಪ್ಪಿಸಲು ಹಾಗೂ ಸೋಂಕು ಹರಡುವಿಕೆಯಿಂದ ರಕ್ಷಿಸಿಕೊಳ್ಳಲು ನಿಜವಾಗಲೂ ಈ ಯೋಜನೆ ಸಂಜೀವಿನಿ ಇದ್ದಂತೆ’ ಎಂದು ಹೇಳಿದರು.

‘ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಹೆಚ್ಚು ಜನ ಇದರ ಲಾಭ ಪಡೆಯಲು ಪ್ರೇರಣೆ ನೀಡುವಂತೆ ಸೂಚಿಸಲಾಗಿದೆ. ತಮ್ಮಲ್ಲಿರುವ ಕಂಪ್ಯೂಟರ್ ಇಲ್ಲವೇ ಮೊಬೈಲ್‍ನ ಇ-ಸಂಜೀವಿನಿ ಆ್ಯಪ್‌ ಬಳಸಿ ತಮ್ಮ ಹೆಸರು, ಲಿಂಗ, ವಯಸ್ಸು ನಮೂದಿಸಿ ನೋಂದಣಿ ಮಾಡಿಸಬೇಕು. ನಂತರ ವೆಬ್ ವಿಡಿಯೊ ಮೂಲಕ ವೈದ್ಯರು ನೇರವಾಗಿ ತಮ್ಮ ಸಂಪರ್ಕಕ್ಕೆ ಬಂದು ಕಾಯಿಲೆ ಕುರಿತು ವಿವರವಾದ ಮಾಹಿತಿ ಪಡೆದು ತಕ್ಷಣ ಚಿಕಿತ್ಸೆಗೆ ಸೂಕ್ತ ಸಲಹೆ ನೀಡಲಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ ಎಂಬ ಹೆಸರಿನಲ್ಲಿ ಈ ಆ್ಯಪ್‌ ಸಿದ್ಧಪಡಿಲಾಗಿದೆ. ಯಾರು ಎಲ್ಲಿ ಬೇಕಾದರೂ ಇದನ್ನು ಬಳಸಿ ಆರೋಗ್ಯ ಸೇವೆ ಪಡೆದುಕೊಳ್ಳಬಹುದು’ ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶರಣಯ್ಯ ಸ್ವಾಮಿ, ‘ಇ-ಸಂಜೀವಿನಿ ಯೋಜನೆ ಜನರಿಗೆ ತುಂಬಾ ಅನುಕೂಲ ಇದೆ. ಇದರ ಬಳಕೆ ಕುರಿತು ಜನರಿಗೆ ತಿಳಿವಳಿಕೆ ಮೂಡಿಸಬೇಕಿದೆ’ ಎಂದರು.

ಆಡಳಿತ ವೈದ್ಯಾಧಿಕಾರಿ ಡಾ.ಸಿದ್ಧಾರ್ಥ, ಶಾಲಾ– ಕಾಲೇಜು ವಿದ್ಯಾರ್ಥಿಗಳು ಈ ಕುರಿತು ತಿಳಿದುಕೊಂಡು ತಮ್ಮ ಕುಟುಂಬ ಸದಸ್ಯರಿಗೆ ನೆರವು ಆಗಬೇಕಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.