ADVERTISEMENT

ಔರಾದ್ |ಬೆಳೆ ಹಾನಿ ಪರಿಹಾರದಿಂದ ರೈತರು ವಂಚಿತ: ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:21 IST
Last Updated 5 ಡಿಸೆಂಬರ್ 2025, 7:21 IST
ಔರಾದ್ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳು ಇದ್ದರು
ಔರಾದ್ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳು ಇದ್ದರು   

ಔರಾದ್: ‘ಭಾರಿ ಮಳೆಯಿಂದ ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು ಹಾನಿಯಾಗಿದ್ದು ಔರಾದ್ ಕ್ಷೇತ್ರದಲ್ಲಿ. ಆದರೆ ಪರಿಹಾರ ವಿತರಣೆಯಲ್ಲಿ ಅತಿ ಕಡಿಮೆಯಾಗಿದೆ’ ಎಂದು ಶಾಸಕ ಪ್ರಭು ಚವಾಣ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಳೆ ಹಾನಿ ಪರಿಹಾರ ಸಾಕಷ್ಟು ರೈತರಿಗೆ ಸಿಕ್ಕಿಲ್ಲ. ಕೆಲ ರೈತರಿಗೆ ಒಂದು ಕಂತು, ಮತ್ತೆ ಕೆಲ ರೈತರಿಗೆ ಎರಡನೇ ಕಂತಿನ ಹಣ ಬಂದಿದೆ. ಇನ್ನು ಹಲವು ರೈತರಿಗೆ ಒಂದೂ ಕಂತು ಬಂದಿಲ್ಲ. ಈ ಬಗ್ಗೆ ಕೇಳಲು ಹೋದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ’ ಎಂದರು.

‘ನಮ್ಮಲ್ಲಿ ಶೇ 60ರಷ್ಟು ರೈತರು ಅನಕ್ಷರಸ್ಥರಿದ್ದಾರೆ. ಹೀಗಾಗಿ ಸರಿಯಾದ ಮಾರ್ಗದರ್ಶನ ಮಾಡಿ ಬೆಳೆ ಹಾನಿ ಪರಿಹಾರ ಸಿಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ಆದರೆ ಹಣ ಕೊಟ್ಟವರ ಹೊಲ ಸರ್ವೆ ಮಾಡಿದ್ದಾರೆ. ಅಂತಹವರಿಗೆ ಮಾತ್ರ ಪರಿಹಾರ ಹಣ ಬರುತ್ತಿದೆ. ಉಳಿದವರಿಗೆ ಬರುತ್ತಿಲ್ಲ. ಇದಕ್ಕೆ ನೀವೇ ಜವಾಬ್ದಾರರು. ಆಗಿರುವ ಲೋಪ ಸರಿಪಡಿಸಬೇಕು’ ಎಂದು ತಹಶೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ತಹಶೀಲ್ದಾರ್ ಮಹೇಶ ಪಾಟೀಲ, ಅಮಿತ ಕುಲಕರ್ಣಿ, ತಾಪಂ. ಇಒ ಕಿರಣ ಪಾಟೀಲ, ಹಣಮಂತರಾವ ಕೌಟಗೆ ಹಾಗೂ ವಿವಿಧ ಇಲಾಖೆ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಇದ್ದರು.

ಜೆಜೆಎಂ ಕಾಮಗಾರಿಯಲ್ಲಿ ಭಾರಿ ಅಕ್ರಮ
ಔರಾದ್ ಕ್ಷೇತ್ರದಲ್ಲಿ ಜಲ ಜೀವನ ಮಿಷನ್ (ಜೆಜೆಎಂ) ಕಾಮಗಾರಿಯಲ್ಲಿ ಭಾರಿ ಅಕ್ರಮ ಆಗಿದೆ ಎಂದು ಶಾಸಕ ಪ್ರಭು ಚವಾಣ್ ಹೇಳಿದರು. ಅನೇಕ ಗ್ರಾಮಗಳಲ್ಲಿ ಜೆಜೆಎಂ ಕೆಲಸ ಆಗಿದೆ ಎಂದು ಹಣ ಎತ್ತಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ನೋಡಿದರೆ ಕೆಲ ಕಡೆ ಕಾಮಗಾರಿ ಪೂರ್ಣ ಆಗಿಲ್ಲ. ಪೂರ್ಣ ಆದ ಕಡೆ ನೀರು ಬರುತ್ತಿಲ್ಲ. ಪಿಡಿಒಗಳಿಗೆ ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಹಣ ನೀಡಿ ಕಾಮಗಾರಿ ಪೂರ್ಣ ಆಗಿದೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದರಲ್ಲಿ ಎಇಇ ಹಾಗೂ ಜೆಇಗಳು ಶಾಮಿಲಾಗಿದ್ದಾರೆ. ಆಗಿರುವ ಈ ಲೋಪ ಸರಿಪಡಿಸದೇ ಹೋದರೆ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಮಾಡುತೇನೆ. ಎಲ್ಲೆಲ್ಲಿ ಜೆಜೆಎಂ ಕೆಲಸ ಲೋಪ ಆಗಿದೆ ಎಂಬುದನ್ನು ಪತ್ತೆ ಮಾಡಿ ಸಂಬಂಧಿತ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಇದರಲ್ಲಿ ಶಾಮಿಲಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಜಿಲ್ಲಾ ಪಂಚಾಯತ್ ಸಿಇಒ ಡಾ. ಗಿರೀಶ್ ಬದೋಲೆ ಅವರಿಗೆ ಮೊಬೈಲ್ ಮೂಲಕ ಮಾತನಾಡಿ ತಿಳಿಸಿದರು.
ಕನ್ನಡ ಶಾಲೆ-ತಪ್ಪು ಹೇಳಿಕೆ:
ಆಕ್ಷೇಪ ತಾಲ್ಲೂಕಿನ ಗಡಿ ಭಾಗದ ಕನ್ನಡ ಶಾಲೆ ಹಾಗೂ ಶಿಕ್ಷಕರ ಬಗ್ಗೆ ತಪ್ಪು ಹೇಳಿಕೆ ನೀಡಿದರೂ ತಾವು ಸುಮ್ಮನೆ ಕೂಡುತ್ತಿದ್ದೀರಿ ಎಂದು ಶಾಸಕ ಪ್ರಭು ಚವಾಣ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಎರಡು ದಶಕದ ಹಿಂದೆ ಹೋಲಿಸಿದಾಗ ತಾಲ್ಲೂಕಿನ ಗಡಿ ಭಾಗದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕನ್ನಡ ಶಾಲೆಗಳು ಕನ್ನಡ ಶಿಕ್ಷಕರನ್ನು ತುಂಬುವ ಕೆಲಸ ಆಗಿದೆ. ಖಾಲಿ ಇರುವ ಕಡೆ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಈ ಬಗ್ಗೆ ತಾವು ಸ್ಪಷ್ಟನೆ ನೀಡಬೇಕು ಎಂದು ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ ಹೇಳಿಕೆಗೆ ಶಾಸಕರು ಗರಂ ಆಗಿಯೇ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.