ADVERTISEMENT

ದಸರಾ ಸಂಭ್ರಮ: ರಾವಣ ಪ್ರತಿಕೃತಿ ದಹನ

ನಗರದೆಲ್ಲಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:45 IST
Last Updated 19 ಅಕ್ಟೋಬರ್ 2018, 19:45 IST
ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ರಾಮಲೀಲಾ ನಾಟಕ ಪ್ರದರ್ಶಿಸಿದರು
ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ರಾಮಲೀಲಾ ನಾಟಕ ಪ್ರದರ್ಶಿಸಿದರು   

ಬೀದರ್: ನಗರದ ಸಾಯಿ ಆದರ್ಶ ಶಾಲಾ ಮೈದಾನದಲ್ಲಿ ರಾಮಲೀಲಾ ಉತ್ಸವ ಹಾಗೂ ದಸರಾ ಸಂಭ್ರಮ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ವಿಜಯ ದಶಮಿ ಪ್ರಯುಕ್ತ 40 ಅಡಿ ಎತ್ತರದ ರಾವಣನ ಪ್ರತಿಕೃತಿಯನ್ನು ದಹನ ಮಾಡಲಾಯಿತು.

ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ರಾಮಲೀಲಾ ನಾಟಕ ಪ್ರದರ್ಶಿಸಿದರು. ಸಂಗೀತ ಕಲಾವಿದ ಕೃಷ್ಣ ಮುಖೇಡಕರ್ ಹಾಗೂ ತಂಡದವರು ಸಂಗೀತ ಸುಧೆ ಹರಿಸಿದರು. ಗುರುವಾರ ನಾಟ್ಯಶ್ರೀ ತಂಡದವರು ಭರತನಾಟ್ಯ, ಕಲಾ ತಂಡಗಳು ಜಾನಪದ, ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕಾರ್ಯಕ್ರಮ ನಡೆಸಿಕೊಟ್ಟರು.

ಭವಾನಿ ಮೂರ್ತಿ ಮೆರವಣಿಗೆ: ನಗರದ ಕುಂಬಾರವಾಡ ಹಾಗೂ ಲಾಡಗೇರಿಯಲ್ಲಿ ದುರ್ಗೆಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಯಿತು. ಶುಕ್ರವಾರ ನಗರದಲ್ಲಿ ಭವಾನಿ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು.

ADVERTISEMENT

ಗೌಳಿ ಸಮಾಜದವರು ಎಮ್ಮೆಗಳ ಮೈಗೆ ಎಣ್ಣೆ ಹಚ್ಚಿ ಕೋಡುಳಿಗೆ ಕೇಸರಿ ಬಣ್ಣ ಬಳಿದು ಓಲ್ಡ್‌ಸಿಟಿಯಲ್ಲಿ ಮೆರವಣಿಗೆ ಮಾಡಿದರು. ಎಮ್ಮೆಗಳ ಮಾಲೀಕರು ಗುಂಪಿನಲ್ಲಿ ಎಮ್ಮೆಗಳೊಂದಿಗೆ ಓಡುತ್ತಿರುವ ದೃಶ್ಯ ಕಂಡು ಬಂದಿತು.

ಜಿಲ್ಲೆಯಲ್ಲಿ ಕೆಲವು ಕಡೆಜನ ಗುರುವಾರ, ಇನ್ನು ಕೆಲ ಕಡೆ ಶುಕ್ರವಾರ ವಿಜಯ ದಶಮಿ ಆಚರಿಸಿದರು. ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ಎಲೆ ಕೊಡುವ ಮೂಲಕ ಹಬ್ಬದ ಶುಭಾಶಯ ಕೋರಿದರು.

ಬನ್ನಿಕೊಟ್ಟು ಶುಭಾಶಯ: ಕುಟುಂಬದ ಸದಸ್ಯರ ಜತೆ ಮನೆಯಲ್ಲಿ ಸಿಹಿ ಖಾದ್ಯಗಳೊಂದಿಗೆ ಭೋಜನ ಸವಿದರು. ಮಕ್ಕಳು, ಯುವಕರು ಹಾಗೂ ಹಿರಿಯರು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು.

ಗ್ರಾಮಗಳಲ್ಲಿ ಹೊಲಗಳಿಗೆ ಹೋಗಿ ಬನ್ನಿ ತಂದರು. ಜಗಲಿ ಮೇಲೆ ಸ್ಥಾಪಿಸಿದ್ದ ಘಟ್ಟದ ನವಧಾನ್ಯದ ಸಸಿಗಳನ್ನು ದೇವರಿಗೆ ಸಮರ್ಪಿಸಿದರು. ನಂತರ ನೆಂಟರು, ಸ್ನೇಹಿತರು, ಪರಿಚಯಸ್ಥರ ಮನೆಗಳಿಗೆ ತೆರಳಿ ಬನ್ನಿ ಎಲೆ ಕೊಟ್ಟು ಹಬ್ಬದ ಶುಭ ಕೋರಿದರು.
ಸ್ನೇಹಿತರು ಪರಸ್ಪರ ಬನ್ನಿ ಎಲೆ ನೀಡಿ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಅನೇಕರು ಮನೆ ಬಂದ ಅತಿಥಿಗಳಿಗೆ ಕರ್ಜಿಕಾಯಿ, ಕೊಡಬಳೆ, ಹಾಲು, ಚಹಾ ಕೊಟ್ಟು ಸತ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.