ADVERTISEMENT

ಪದವೀಧರ ಈಗ ಯಶಸ್ವಿ ರೈತ

ಖಾಸಗಿ ಕಾಲೇಜಿನ ಕೆಲಸ ಬಿಟ್ಟು ಕೃಷಿಯಲ್ಲಿ ತೊಡಗಿದ ಅಂಕುಶ ವಾಡಿಕರ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 7:59 IST
Last Updated 1 ಆಗಸ್ಟ್ 2020, 7:59 IST
ಕಮಲನಗರ ತಾಲ್ಲೂಕಿನ ಗಂಗನಬೀಡ್ ರೈತ ಅಂಕುಶ ವಾಡಿಕರ್ ತಮ್ಮ ಹೊಲದಲ್ಲಿ ಬೆಳೆದ ಮೆಣಸಿನಕಾಯಿ ತೋರಿಸುತ್ತಿರುವುದು
ಕಮಲನಗರ ತಾಲ್ಲೂಕಿನ ಗಂಗನಬೀಡ್ ರೈತ ಅಂಕುಶ ವಾಡಿಕರ್ ತಮ್ಮ ಹೊಲದಲ್ಲಿ ಬೆಳೆದ ಮೆಣಸಿನಕಾಯಿ ತೋರಿಸುತ್ತಿರುವುದು   

ಕಮಲನಗರ: ತಾಲ್ಲೂಕಿನ ಗಂಗನಬೀಡ್ ಗ್ರಾಮದ ರೈತರೊಬ್ಬರು ಖಾರದ ಮೆಣಸಿನಕಾಯಿ ಬೆಳೆದು ಕೈತುಂಬ ಹಣ ಮಾಡಿಕೊಂಡಿದ್ದಾರೆ.

ಎಂ.ಎ. ಪದವೀಧರ ಅಂಕುಶ ವಾಡಿಕರ್ ಒಂದು ಎಕರೆ ಪ್ರದೇಶದಲ್ಲಿ ಸದ್ಯ ₹1.25 ಲಕ್ಷ ಹಸಿ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ. ಇನ್ನು ಕಡಿಮೆ ಅಂದರೆ ₹1.50 ಲಕ್ಷದ ಮೆಣಸಿನ ಮಾರಾಟ ಮಾಡುವ ವಿಶ್ವಾಸ ಹೊಂದಿದ್ದಾರೆ.

‘ನಾನು ಪ್ರತಿ ವರ್ಷ ಹಸಿ ಮೆಣಸಿನಕಾಯಿ ಮಾರಿ ₹4 ಲಕ್ಷ ಹಣ ಮಾಡಿಕೊಳ್ಳುತ್ತಿದ್ದೆ. ಆದರೆ ಲಾಕ್‌ಡೌನ್‌ ಕಾರಣ ನಗರ ಪ್ರದೇಶಗಳಿಗೆ ಕೊಂಡೊ
ಯ್ಯಲು ಸಾಧ್ಯವಾಗದೆ ಈ ವರ್ಷ ಸ್ವಲ್ಪ ಆದಾಯ ಕಡಿಮೆ ಆಗಿದೆ. ಆದರೂ ನಾನು ಇಂತಹ ಸಂಕಷ್ಟದ ಸಮಯದಲ್ಲಿ ಸಂತಸವಾಗಿದ್ದೇನೆ’ ಎಂದು ವಾಡಿಕರ್ ಹೇಳುತ್ತಾರೆ.

ADVERTISEMENT

‘ನಾನು ಎಂ.ಎ. ಪದವೀಧರ. ಕೆಲ ವರ್ಷ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡಿದೆ. ಆದರೆ ಅವರು ಕೊಡುವ ಹಣ ನನ್ನ ಸ್ವಂತ ಖರ್ಚಿಗೂ ಸಾಕಾಗುತ್ತಿರಲಿಲ್ಲ. ಹೀಗಾಗಿ ಅದೂ ಬಿಟ್ಟು ಈಗ ಕೃಷಿ ಕಾಯದಲ್ಲಿ ತೊಡಗಿಸಿಕೊಂಡಿದ್ದೇನೆ. ಇತರೆ ಮೂರು ಎಕರೆ ಜಮೀನಿನಲ್ಲಿ ಟೊಮೆಟೊ, ಆಲು, ಬದನೆಕಾಯಿ ಸೇರಿದಂತೆ ತರಕಾರಿ ಹಣ್ಣು ಬೆಳೆಯುತ್ತೇನೆ. ಉದಗೀರ್ ಸಮೀಪ ಇರುವುದರಿಂದ ಮಾರುಕಟ್ಟೆ ಸಮಸ್ಯೆ ಇಲ್ಲ. ಎಲ್ಲ ಖರ್ಚು ಹೋಗಿ ವರ್ಷಕ್ಕೆ ₹5 ಲಕ್ಷ ಆದಾಯ ಬರುತ್ತದೆ. ಇದರ ಮೇಲೆ ನಮ್ಮ ಕುಟುಂಬ ಸುಖವಾಗಿ ಇದೆ’ ಎಂದು ವಾಡಿಕರ್ ಕೃಷಿಯಲ್ಲಿ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ.

‘ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗೆ ವಿಫುಲ ಅವಕಾಶವಿದೆ. ಅಂಕುಶ ವಾಡಿಕರ್ ಅವರು ಬೆಳೆದ ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ. ಇರುವ ಕಡಿಮೆ ನೀರಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಇಳುವರಿ ತೆಗೆಯವ ಪರಿಣತಿ ಹೊಂದಿದ್ದಾರೆ’ ಎಂದು ತೋಟಗಾರಿಕೆ ಅಧಿಕಾರಿ ವೀರಭದ್ರೇಶ್ವರ ತಿಳಿಸಿದ್ದಾರೆ.

‘ತೋಟಗಾರಿಕೆ ಬೆಳೆ ಬೆಳೆಯಲು ಮುಂದಾದ ರೈತರಿಗೆ ಇಲಾಖೆಯಿಂದ ನೆರವು ನೀಡಲಾಗುತ್ತದೆ. ವಿವಿಧ ತಳಿಯ ಬೀಜ ಮತ್ತು ಸಸಿಗಳು ರಿಯಾಯ್ತಿಯಲ್ಲಿ ನೀಡಲಾಗುತ್ತದೆ. ನೀರಿನ ಸೌಲಭ್ಯ ಹೊಂದಿದ ರೈತರು ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ಪಡೆದುಕೊಳ್ಳಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.