ADVERTISEMENT

ಖಟಕಚಿಂಚೋಳಿ: ನೀರಿನ ಘಟಕ ದುರಸ್ತಿಗೆ ಆಗ್ರಹ

ಶುದ್ಧ ಕುಡಿಯುವ ನೀರಿನಿಂದ ವಂಚಿತರಾದ ಕುಮಾರಚಿಂಚೋಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 4:22 IST
Last Updated 15 ಸೆಪ್ಟೆಂಬರ್ 2021, 4:22 IST
ಕುಮಾರಚಿಂಚೋಳಿ ಗ್ರಾಮದಲ್ಲಿ ಕೆಟ್ಟು ನಿಂತ ಶುದ್ಧ ನೀರಿನ ಘಟಕ
ಕುಮಾರಚಿಂಚೋಳಿ ಗ್ರಾಮದಲ್ಲಿ ಕೆಟ್ಟು ನಿಂತ ಶುದ್ಧ ನೀರಿನ ಘಟಕ   

ಖಟಕಚಿಂಚೋಳಿ: ಸಮೀಪದ ಕುಮಾರಚಿಂಚೋಳಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾದ ಕೆಲವೇ ದಿನಗಳಲ್ಲಿ ಕೆಟ್ಟು ಹೋಗಿದ್ದು ಗ್ರಾಮಸ್ಥರು ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ದೊರೆಯಬೇಕೆಂದು ಸರ್ಕಾರ ಈಗಾಗಲೇ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ ಅವುಗಳನ್ನು ನಿರ್ವಹಣೆ ಮಾಡಲು ನೀಡಿರುವ ಖಾಸಗಿ ಏಜೆನ್ಸಿಗಳ ನಿರ್ಲಕ್ಷ್ಯದಿಂದ ಕೆಟ್ಟು ನಿಂತಿವೆ.

ಸುಮಾರು ಮೂರು ಸಾವಿರ ಜನಸಂಖ್ಯೆ ಹೊಂದಿರುವ ಕುಮಾರಚಿಂಚೋಳಿಯಲ್ಲಿ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಗ್ರಾಮದಲ್ಲಿ ಬಹುತೇಕ ಯುವಕರು ಶಿಕ್ಷಿತರಾಗಿದ್ದರೂ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಲು ಆಗದಿರುವುದು ಬಹಳ ದುರದೃಷ್ಟಕರ ಎಂದು ಗ್ರಾಮದ ರೇವಣಸಿದ್ಧಯ್ಯ ಸ್ವಾಮಿ ಹಾಗೂ ಉಮೇಶ ಉಸ್ತರ್ಗಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರತಿದಿನ ಸರತಿ ಸಾಲಿನಲ್ಲಿ ನಿಂತು ನೀರು ತರುವುದೇ ಒಂದು ದೊಡ್ಡ ಕೆಲಸವಾಗಿದೆ ಎಂದು ಹಿರಿಯರು ತಮ್ಮ ಅಳಲನ್ನು ತೋಡಿಕೊಂಡರು.

’ಸಂಬಂಧಪಟ್ಟ ಅಧಿಕಾರಿಗಳು ಘಟಕದ ಜವಾಬ್ದಾರಿ ಮರೆತಿದ್ದಾರೆ. ನೀರಿನ ಘಟಕವನ್ನು ದುರಸ್ತಿಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು‘ ಎಂದು ಜನ್ಮಭೂಮಿ ಕನ್ನಡ ರಕ್ಷಣಾ ಪಡೆ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಕೆನಾಡೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.