ಚಿಟಗುಪ್ಪ: ಪಟ್ಟಣದ ಮಡಿವಾಳೇಶ್ವರ ಗವಿ ಪಕ್ಕದ ವೀರಶೈವ ಲಿಂಗಾಯತ, ಹಡಪದ, ಹೂಗಾರ, ಒಡೆಯರ, ಸಾಳಿ ಇತರ ಸಮುದಾಯದವರ ರುದ್ರಭೂಮಿ ಹಲವು ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
ರುದ್ರಭೂಮಿಯಲ್ಲಿ ರಸ್ತೆ, ನೀರು, ಸ್ವಚ್ಛತೆ ವ್ಯವಸ್ಥೆ ಇಲ್ಲದೇ ಅಂತ್ಯಸಂಸ್ಕಾರಕ್ಕೆ ಸಮಸ್ಯೆಯಾಗುತ್ತಿದೆ. ರುದ್ರಭೂಮಿಯೆಲ್ಲೆಡೆ ಮುಳ್ಳು ಕಂಟಿ ಬೆಳೆದಿದ್ದು, ಜನ ನಡೆದುಕೊಂಡು ಹೋಗುವುದು ಕಷ್ಟವಾಗಿದೆ. ಸುತ್ತಲಿನ ಪ್ರದೇಶ ಅನಧಿಕೃತವಾಗಿ ನಾಗರಿಕರು ಆಕ್ರಮಿಸುತ್ತಿದ್ದು, ಕಾಂಪೌಂಡ್ ನಿರ್ಮಿಸುವ ಅಗತ್ಯವಿದೆ ಎಂದು ಮಡಿವಾಳೇಶ್ವರ ಗವಿ ದೇಗುಲದ ಅಧ್ಯಕ್ಷ ರವಿ ಶಿವಪೂಜಿ ಆಗ್ರಹಿಸಿದ್ದಾರೆ.
‘ಪಟ್ಟಣದಿಂದ ಹುಡಗಿ ಗ್ರಾಮದ ಕಡೆ ಹೋಗುವ ರಸ್ತೆ ಪಕ್ಕದ ಮಹಾದೇವ ಮಂದಿರ ಸಮೀಪದಲ್ಲಿ ಬ್ರಾಹ್ಮಣ, ಕೋಮಟಿ ಇತರ ಸಮುದಾಯವರ ಅಗ್ನಿಸ್ಪರ್ಶ ಮೂಲಕ ಅಂತ್ಯಸಂಸ್ಕಾರ ಮಾಡುವ ರುದ್ರಭೂಮಿಯೂ ಸಂಪೂರ್ಣವಾಗಿ ಹಾಳಾಗಿದೆ. ಚಿತಾಗಾರದ ತಗಡುಗಳು ಗಾಳಿಗೆ ಹಾರಿವೆ. ಕೊಳವೆ ಬಾವಿ ಅವಶ್ಯಕತೆ ಇದೆ’ ಎಂದು ಪಟ್ಟಣದ ಮಲ್ಲಿಕಾರ್ಜುನ ತಿಳಿಸುತ್ತಾರೆ.
ತಾಲ್ಲೂಕಿನ ಮುತ್ತಂಗಿ ಗ್ರಾಮದಿಂದ ಮದರಗಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ರುದ್ರಭೂಮಿ ಹಾಗೂ ನಿರ್ಣಾ, ಮನ್ನಾಎಖ್ಖೇಳಿ, ತಾಳಮಡಗಿ, ಮಂಗಲಗಿ ಇತರ ಗ್ರಾಮಗಳಲ್ಲಿಯ ರುದ್ರ ಭೂಮಿಯ ಪರಿಸ್ಥಿತಿಯೂ ಅವ್ಯವಸ್ಥೆಗಳಿಂದ ಕೂಡಿದೆ.
ಬಹುತೇಕ ಗ್ರಾಮಗಳಲ್ಲಿ ಈ ಹಿಂದೆ ಇದ್ದ ರುದ್ರಭೂಮಿ ವಿವಿಧ ಕಾರಣಗಳಿಂದ ಅತಿಕ್ರಮಣ ನಡೆಸಿ ಸದರಿ ಸ್ಥಳದಲ್ಲಿ ಕಟ್ಟಡಗಳು ತಲೆಎತ್ತಿವೆ.
ಮುಖ್ಯವಾಗಿ ಗ್ರಾಮಗಳಲ್ಲಿ ಲಭ್ಯವಿರುವ ರುದ್ರಭೂಮಿಗಳಿಗೆ ತಕ್ಷಣ ಕಾಂಪೌಂಡ್ ನಿರ್ಮಿಸಬೇಕಾದ ಅನಿವಾರ್ಯತೆ ಎದ್ದು ಕಾಣುತ್ತಿದೆ.
ರುದ್ರಭೂಮಿಗಳ ಅಭಿವೃದ್ಧಿಗೆ ಪುರಸಭೆ ಬಜೆಟ್ ಮಂಡನೆಯ ಪೂರ್ವಸಿದ್ಧತಾ ಸಭೆಯಲ್ಲಿ ಚುನಾಯಿತ ಸದಸ್ಯರು ಚರ್ಚಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ- ಹುಸಾಮೊದ್ದಿನ್ ಮುಖ್ಯಾಧಿಕಾರಿ ಪುರಸಭೆ ಚಿಟಗುಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.