ADVERTISEMENT

₹ 50 ಕೋಟಿ ವೆಚ್ಚದಲ್ಲಿ ಗೋರಟಾ ಸ್ಮಾರಕ ಅಭಿವೃದ್ಧಿ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 16:01 IST
Last Updated 26 ಮಾರ್ಚ್ 2023, 16:01 IST
ಬೀದರ್‌ ಜಿಲ್ಲೆಯ ಹುಲಸೂರು ತಾಲ್ಲೂಕಿನ ಗೋರಟಾ (ಬಿ) ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಮರಣಹೊಂದಿದ ‘ಹುತಾತ್ಮರ ಸ್ಮಾರಕ’ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಲೋಕಾರ್ಪಣೆಗೊಳಿಸಿದರು. ಬಿ.ಎಸ್. ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್, ಭಗವಂತ ಖೂಬಾ ಇತರರು ಇದ್ದರು
ಬೀದರ್‌ ಜಿಲ್ಲೆಯ ಹುಲಸೂರು ತಾಲ್ಲೂಕಿನ ಗೋರಟಾ (ಬಿ) ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಮರಣಹೊಂದಿದ ‘ಹುತಾತ್ಮರ ಸ್ಮಾರಕ’ವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಲೋಕಾರ್ಪಣೆಗೊಳಿಸಿದರು. ಬಿ.ಎಸ್. ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್, ಭಗವಂತ ಖೂಬಾ ಇತರರು ಇದ್ದರು   

ಬೀದರ್‌: ‘ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋರಟಾ (ಬಿ) ಹುತಾತ್ಮ ಸ್ಮಾರಕವನ್ನು ₹ 50 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದರು.

ಜಿಲ್ಲೆಯ ಹುಲಸೂರು ತಾಲ್ಲೂಕಿನ ಗೋರಟಾ (ಬಿ) ಗ್ರಾಮದ ಹೊರ ವಲಯದಲ್ಲಿ ಹುತಾತ್ಮ ಸ್ಮಾರಕ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

‘ಗೋರಟಾದಲ್ಲಿ ಧ್ವನಿ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಸಾಕ್ಷ್ಯ ಚಿತ್ರದ ಮೂಲಕ ನಿಜಾಮರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದವರ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು. ರಾಷ್ಟ್ರ ಮಟ್ಟದ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ತೆಲಂಗಾಣ ಸರ್ಕಾರ ಹೈದರಾಬಾದ್‌ ವಿಮೋಚನಾ ದಿನ ಆಚರಿಸುತ್ತಿಲ್ಲ. ಆದರೆ, ಕಳೆದ ವರ್ಷ ಬಿಜೆಪಿ ಹೈದರಾಬಾದ್‌ನಲ್ಲಿ ಹೈದರಾಬಾದ್‌ ವಿಮೋಚನಾ ದಿನ ಆಚರಿಸಿದೆ. ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇಕಡ 4ರಷ್ಟಿದ್ದ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಡಿತಗೊಳಿಸಿ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಪರಿಶಿಷ್ಟ ಜಾತಿಯಲ್ಲಿನ ಸಮುದಾಯಕ್ಕೂ ಒಳ ಮೀಸಲಾತಿ ನೀಡಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ ಪ್ರತಿಯೊಂದು ಕೆಲಸವನ್ನು ಲಟಕಾನಾ, ಅಟಕಾನಾ, ಭಟಕಾನಾ (ನೇತಾಡಿಸುವುದು, ಸಿಕ್ಕಿಸುವುದು, ಅಲೆದಾಡಿಸುವುದು) ಮಾಡುತ್ತಿತ್ತು. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ನ್ಯಾಯಪೀಠ ರಚಿಸಿ ಅಯೋಧ್ಯೆಯ ರಾಮಮಂದಿರ ಸಮಸ್ಯೆಯನ್ನು ನಿವಾರಿಸಿದರು. ಕಾಶ್ಮೀರ ಸಮಸ್ಯೆಯನ್ನೂ ಬಗೆಹರಿಸಲಾಯಿತು’ ಎಂದು ತಿಳಿಸಿದರು.

ಶಾಸಕ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ರಾಜ್ಯ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ.ಮುಳೆ, ಶಾಸಕ ಶರಣು ಸಲಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.