ADVERTISEMENT

‘ಸುಳ್ಳು ಜಾತಿ ಪ್ರಮಾಣಪತ್ರ ಕೊಡಲು ಬಿಡೇವು’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 14:47 IST
Last Updated 13 ಮಾರ್ಚ್ 2021, 14:47 IST
ಬೀದರ್‌ನ ಛಲವಾದಿ ಸಭಾಭವನದಲ್ಲಿ ನಡೆದ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ ಹಿರಿಯ ಮುಖಂಡ ರಾಜಕುಮಾರ ಮೂಲಭಾರತಿ ಮಾತನಾಡಿದರು
ಬೀದರ್‌ನ ಛಲವಾದಿ ಸಭಾಭವನದಲ್ಲಿ ನಡೆದ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ ಹಿರಿಯ ಮುಖಂಡ ರಾಜಕುಮಾರ ಮೂಲಭಾರತಿ ಮಾತನಾಡಿದರು   

ಬೀದರ್‌: ‘ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆಯಲು ಬಲಾಢ್ಯ ಸಮುದಾಯದವರು ಪದಗಳನ್ನೇ ದುರುಪಯೋಗ ಮಾಡಿಕೊಂಡು ಅಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ಕೆಲ ಭ್ರಷ್ಟ ಅಧಿಕಾರಿಗಳು ಹಣ ಪಡೆದು ಸುಳ್ಳು ಜಾತಿ ಪ್ರಮಾಣಪತ್ರ ಕೊಟ್ಟಿದ್ದಾರೆ. ಇನ್ನು ಯಾವ ಕಾರಣಕ್ಕೂ ಸುಳ್ಳು ಜಾತಿ ಪ್ರಮಾಣಪತ್ರ ಕೊಡಲು ಬಿಡೇವು’ ಎಂದು ಹಿರಿಯ ಮುಖಂಡ ರಾಜಕುಮಾರ ಮೂಲಭಾರತಿ ಗುಡುಗಿದರು.

ನಗರದ ಛಲವಾದಿ ಸಭಾಭವನದಲ್ಲಿ ಶನಿವಾರ ನಡೆದ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೇಡ ಜಂಗಮ, ಮಾಲ ಜಂಗಮ, ಭೋವಿ ಪದಗಳ ದುರುಪಯೋಗ ಪಡೆದು ಕೆಲವರು ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಶೋಷಿತರ ಮೀಸಲಾತಿಯನ್ನು ವ್ಯವಸ್ಥಿತವಾಗಿ ಕಬಳಿಸಿ ರಾಜಕೀಯ ಅಧಿಕಾರ ಹಿಡಿಯುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಈಗಾಗಲೇ ಪರಿಶಿಷ್ಟರ ಪಟ್ಟಿಯಲ್ಲಿ ಹಲವು ಜಾತಿಗಳ ಸೇರ್ಪಡೆಯಿಂದಾಗಿ ಮೂಲ ಜಾತಿಗಳಿಗೆ ಅನ್ಯಾಯವಾಗಿದೆ. ಅರ್ಹ ಪರಿಶಿಷ್ಟರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಒಗ್ಗಟ್ಟಿನ ಹೋರಾಟ ನಡೆಸದಿದ್ದರೆ ಶೋಷಿತ ಸಮುದಾಯಕ್ಕೆ ಮುಂದೊಂದು ದಿನ ಗಂಡಾಂತರ ಕಾದಿದೆ’ ಎಂದು ಎಚ್ಚರಿಸಿದರು.

‘ಅನ್ಯಾಯ ಸಹಿಸಿಕೊಳ್ಳುವುದು ಸಹ ಅಪರಾಧಕ್ಕೆ ಸಮಾನ. ಅರ್ಹರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವುದು ಶೋಷಿತ ಸಮುದಾಯದ ಮುಖಂಡರ ಹೊಣೆಯಾಗಿದೆ.ಈ ದಿಸೆಯಲ್ಲಿ ಸಂಘಟಿತ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

ರವಿಕುಮಾರ ವಾಘಮಾರೆ, ಉಮೇಶಕುಮಾರ ಸ್ವಾರಳ್ಳಿಕರ್, ಅಭಿ ಕಾಳೆ ಮಾತನಾಡಿದರು.

ಚಂದ್ರಕಾಂತ ನಿರಾಟೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿರೋಧಿ ಹೋರಾಟ ಸಮಿತಿಯ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಪದಾಧಿಕಾರಿಗಳು:
ಗೌರವಾಧ್ಯಕ್ಷ–ಶಿವರಾಜ ತಡಪಳ್ಳಿ, ಕಾರ್ಯಾಧ್ಯಕ್ಷ–ಅಭಿ ಕಾಳೆ, ಅಧ್ಯಕ್ಷ–ರಾಜಕುಮಾರ ಮೂಲಭಾರತಿ,
ಉಪಾಧ್ಯಕ್ಷರು–ಉಮೇಶಕುಮಾರ ಸ್ವಾರಳ್ಳಿಕರ್, ಮಹೇಶ ಗೋರನಾಳಕರ್, ಯುವರಾಜ ಭೆಂಡೆ, ಸಂಜುಕುಮಾರ ಜಂಜೀರೆ, ಮಹಾ ಪ್ರಧಾನ ಕಾರ್ಯದರ್ಶಿ–ಚಂದ್ರಕಾಂತ ನಿರಾಟೆ, ಪ್ರಧಾನ ಕಾರ್ಯದರ್ಶಿ–ಸಂದೀಪ ಕಾಂಟೆ,
ಖಜಾಂಚಿ –ಓಂಪ್ರಕಾಶ ಭಾವಿಕಟ್ಟಿ, ಸಂಘಟನಾ ಕಾರ್ಯದರ್ಶಿಗಳು– ಸಂತೋಷ ಏಣಕೂರೆ, ಮಲ್ಲಿಕಾರ್ಜುನ ಚಿಟ್ಟಾ ,
ಸೂರ್ಯಕಾಂತ ಕಮಠಾಣ, ಮುಕೇಶ ಸಾಚರ್, ನರಸಿಂಗ ಸಾಮ್ರಾಟ, ಪರುಶುರಾಮ ಜಾಧವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.