ಬೀದರ್: ಕರ್ನಾಟಕ ನಾಟಕ ಅಕಾಡೆಮಿಯು ಜನಪದ ಕಲಾವಿದರ ಬಳಗದ ಸಹಯೋಗದೊಂದಿಗೆ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಅಕ್ಟೋಬರ್ 20ರಿಂದ ಮೂರು ದಿನ ನಾಟಕೋತ್ಸವ ಆಯೋಜಿಸಿದೆ.
‘ಮೂರು ಕಲಾ ತಂಡಗಳ ಒಟ್ಟು 60 ಕಲಾವಿದರು ಬೀದರ್ನಲ್ಲಿ ನಾಟಕ ಪ್ರದರ್ಶನ ನೀಡಲಿದ್ದಾರೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂದೀಪ ಬಿ. ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಬೀದರ್ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳು ಕ್ಷೀಣಿಸುತ್ತ ಸಾಗಿದ್ದು, ರಂಗಾಸಕ್ತರನ್ನು ಚುರುಕುಗೊಳಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಂಗ ತರಂಗ ಸಾಮಾಜಿಕ ಟ್ರಸ್ಟ್ ಸಹಕಾರದೊಂದಿಗೆ ನಾಟಕ ಪ್ರದರ್ಶನ ನಡೆಯಲಿದೆ. ಹೊರ ಜಿಲ್ಲೆಗಳಿಂದ ಬರುವ ಕಲಾವಿದರಿಗೆ ನಗರದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.
‘ಮೂರು ದಿನ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ಆರಂಭವಾಗಲಿದೆ. ಅ.20ರಂದು ಡಾ.ಕೆ.ಶಿವರಾಂ ಕಾರಂತ ಕಾದಂಬರಿ ಆಧಾರಿತ ಚೋಮನ ದುಡಿ ನಾಟಕವನ್ನು ವಿಶ್ವರಾಜ ಪಾಟೀಲ ನಿರ್ದೇಶನದಲ್ಲಿ ವಿಶ್ವ ರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದ ಕಲಾವಿದರು ಪ್ರದರ್ಶಿಸಲಿದ್ದಾರೆ’ ಎಂದು ತಿಳಿಸಿದರು.
‘ಅ.21ರಂದು ಲಕ್ಷ್ಮೀಪತಿ ಕೋಲಾರ ರಚಿತ, ಉದಯ ಸೋಸಲೆ ನಿರ್ದೇಶನದ ಪೋಸ್ಟ್ ಬಾಕ್ಸ್ ನಂ.9 ನಾಟಕವನ್ನು ಆಜಿವಿಕಾ ತಂಡ ಹಾಗೂ ಅ.22ರಂದು ಮೈಸೂರು ಶಿವಾನಂದ ಬರೆದ ಹಾಗೂ ನರಸಿಂಹಯ್ಯ ಜಿ.ಎನ್. ನಿರ್ದೇಶನದ ಮಡಿವಾಳ ಮಾಚಿದೇವ ನಾಟಕವನ್ನು ಇಳಕಲ್ದ ನಾಟ್ಯರಾಣಿ ಕಲಾ ಸಂಘದ ಕಲಾವಿದರು ಪ್ರದರ್ಶಿಸುವರು’ ಎಂದು ಹೇಳಿದರು.
ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಹಾಗೂ ಎಂ.ಪಿ. ಮುಧಾಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.