
ಔರಾದ್: ಜಲಜೀವನ ಮಿಷನ್(ಜೆಜೆಎಂ) ಸೇರಿದಂತೆ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ಹಣ ಖರ್ಚಾಗಿದೆ. ಆದರೆ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಮಾತ್ರ ತಪ್ಪಿಲ್ಲ.
ಬೇಸಿಗೆ ಇನ್ನೂ ಆರಂಭವಾಗಿಲ್ಲ. ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯಲ್ಲಿರುವ ತಾಲ್ಲೂಕಿನ ಅನೇಕ ಗ್ರಾಮ, ತಾಂಡಾಗಳಲ್ಲಿ ಬೇಸಿಗೆ ಮುನ್ನವೇ ಕೊಳವೆ ಬಾವಿಗಳು ಬತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಸಾವರಗಾಂವ ಗಡಿಗ್ರಾಮದಲ್ಲಿ ಕೆಲ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿ ಜನರು ಪರದಾಡುವಂತಾಗಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿರುವ ಊರಲ್ಲಿ ಇರುವ ಎರಡು ಕೊಳವೆ ಬಾವಿಗಳು ಬತ್ತಿವೆ. ಹೀಗಾಗಿ ಜನ-ಜಾನುವಾರು ನೀರು ಇರುವ ಕಡೆ ವಲಸೆ ಹೋಗಬೇಕಾಗಿದೆ.
ಇದು ಪ್ರತಿವರ್ಷದ ಸಮಸ್ಯೆಯಾಗಿದೆ. ಬೇಸಿಗೆ ಆರಂಭವಾಗುತ್ತಲೇ ನೀರಿನ ಸಮಸ್ಯೆಯಾಗುತ್ತದೆ. ಅಧಿಕಾರಿಗಳು ಬಂದು ತಾತ್ಕಾಲಿಕ ಪರಿಹಾರ ಒದಗಿಸುತ್ತಾರೆ, ಹೋಗಿ ಬಿಡುತ್ತಾರೆ. ಮತ್ತೇ ಮರು ವರ್ಷ ಸಮಸ್ಯೆ ಮರುಕಳಿಸುತ್ತದೆ. ಹೀಗಾಗಿ ಈ ಸಂಬಂಧ ಜನಪ್ರತಿನಿಧಿಗಳು ಹಾಗೂ ಮೇಲಧಿಕಾರಿಗಳಿಗೆ ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಬೋಂತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾವರಗಾಂವ ದೊಡ್ಡ ಗ್ರಾಮ. ಪ್ರತಿ ಬೇಸಿಗೆಯಲ್ಲಿ ಈ ಜನ ನೀರಿಗಾಗಿ ಸಂಕಟ ಪಡಬೇಕಾಗುತ್ತದೆ. ಜೆಜೆಎಂ ಯೋಜನೆಯಲ್ಲಿ ಸುಮಾರು ₹ 1.40 ಕೋಟಿ ಹಣ ಖರ್ಚಾದರೂ ನೀರಿನ ಬವಣೆ ಮಾತ್ರ ನೀಗಿಲ’ ಎಂದು ಗ್ರಾ.ಪಂ ಸದಸ್ಯ ಬಾಲಾಜಿ ಹೇಳಿದರು.
‘ನೀರಿಗಾಗಿ ಪ್ರತಿ ವರ್ಷ ಹಣ ಖರ್ಚು ಮಾಡುವ ಬದಲು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಬಾವಲಗಾಂವ ಕೆರೆಯಿಂದ ನೀರು ತರುವ ಯೋಜನೆ ಪೂರ್ಣಗೊಂಡರೆ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಆ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ’ ಎಂದು ಅವರು ತಿಳಿಸಿದರು.
‘ಬೇಸಿಗೆ ಬರುತ್ತಿದ್ದಂತೆ ನಮಗೆ ನೀರಿನ ಚಿಂತೆ ಶುರುವಾಗುತ್ತದೆ. ಈ ಮೂರು ತಿಂಗಳು ಕಳೆಯುವುದು ನಮಗೆ ತುಂಬಾ ಕಷ್ಟ. ಬೇಸಿಗೆ ಬಿಸಿಲಲ್ಲಿ ನೀರು ತರಲು ಆಗುವುದಿಲ್ಲ. ಹೀಗಾಗಿ ರಾತ್ರಿ ವೇಳೆ 4-5 ಕಿ.ಮೀ. ದೂರ ಹೋಗಿ ನೀರು ತರಬೇಕಾಗಿದೆ. ಈ ಸಮಸ್ಯೆಯಿಂದಾಗಿ ನಮ್ಮ ಊರಿನ ಯುವಕರಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ’ ಎಂದು ಸಾವರಗಾಂವ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಖಾಸಗಿ ಜಾಗದಲ್ಲಿ ಜೆಜೆಎಂ ಬಾವಿ
ವಿವಾದ ಸಾವರಗಾಂವ ಗ್ರಾಮದಲ್ಲಿ ಜೆಜೆಎಂ ಪೈಪ್ಲೈನ್ ಕೆಲಸ ಪೂರ್ಣಗೊಂಡಿದೆ. ಇದೇ ಅನುದಾನದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಹೊಲದಲ್ಲಿ ತೆರೆದ ಬಾವಿ ಮಾಡಿಕೊಂಡಿದ್ದಾರೆ. ಆದರೆ ಈಗ ಆ ವ್ಯಕ್ತಿ ನೀರು ಕೊಡಲು ತಯಾರಿಲ್ಲ ಎಂದು ಗ್ರಾ.ಪಂ ಸದಸ್ಯ ಬಾಲಾಜಿ ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ನೀರು ಸರಬರಾಜು ವಿಭಾಗದ ಎಇಇ ಮಾರುತಿ ರಾಠೋಡ ಅವರನ್ನು ಸಂಪರ್ಕಿಸಿದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಖಾಸಗಿಯವರಿಂದ ನೀರು ಪೂರೈಕೆ ಸಾವರಗಾಂವ್ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗಿರುವುದು ನಿಜ. ಎರಡೂ ಕೊಳವೆ ಬಾವಿಯಲ್ಲಿ ನೀರು ಕಮ್ಮಿಯಾಗಿದೆ. ಖಾಸಗಿ ವ್ಯಕ್ತಿಯೊಬ್ಬರ ಬಾವಿಯಲ್ಲಿ ಸಾಕಷ್ಟು ನೀರು ಇದೆ. ಮೇಲಧಿಕಾರಿಗಳ ಅನುಮತಿ ಪಡೆದು ಅಲ್ಲಿಂದ ಜನರಿಗೆ ಕುಡಿಯಲು ನೀರು ಪೂರೈಸುತ್ತೇವೆ. ಜೆಜೆಎಂನಲ್ಲಿ ಕೊರೆದ ಬಾವಿ ವಿವಾದಲ್ಲಿ ಇದೆ. ಇದನ್ನು ಮೇಲಧಿಕಾರಿಗಳು ಬಗೆಹರಿಸುತ್ತಾರೆ ಎಂದು ಪಿಡಿಒ ರಮೇಶ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.