ಬಸವಕಲ್ಯಾಣ: `ಬರಗಾಲ ಘೋಷಣೆಯಲ್ಲಿ ಅನ್ಯಾಯ ಮಾಡಲಾಗಿಲ್ಲ. ಮಳೆ ಪ್ರಮಾಣ ಆಧರಿಸಿ ಜಿಲ್ಲೆಯ ಕೆಲ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಗುರುತಿಸಲಾಗಿದೆ' ಎಂದು ಗಣಿ, ಭೂವಿಜ್ಞಾನ ಮತ್ತು ಮುಜರಾಯಿ ಸಚಿವ ರಾಜಶೇಖರ ಪಾಟೀಲ ಸ್ಪಷ್ಟನೆ ನೀಡಿದರು.
ತಾಲ್ಲೂಕಿನ ನಿರ್ಗುಡಿ ಗ್ರಾಮದಲ್ಲಿ ಈಚೆಗೆ ನಡೆದ ಮಹಾದೇವ ದೇವಸ್ಥಾನದ ಜಾತ್ರೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಾಸಕರ ಅನುದಾನದಲ್ಲಿ ದೇವಸ್ಥಾನದ ಸಭಾಭವನ ಕಟ್ಟಲಾಗಿದೆ. ಓಣಿಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಬಸವೇಶ್ವರ ಪುತ್ಥಳಿ ಹಾಗೂ ಇತರೆ ರಾಷ್ಟ್ರಪುರುಷರ ಪುತ್ಥಳಿ ಸ್ಥಾಪಿಸಲು ಸಮಿತಿ ರಚಿಸಲಾಗುವುದು. ಇನ್ನುಳಿದ ಅಭಿವೃದ್ಧಿ ಕಾಮಗಾರಿಗೆ ಪ್ರಯತ್ನಿಸುತ್ತೇನೆ. ಮಹಿಳೆಯರ ಕೋರಿಕೆ ಮೇರೆಗೆ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಕ್ರಮ ತೆಗೆದುಕೊಳ್ಳಲಾಗುವುದು' ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ನಿರ್ಮಲಾ ಮಾನಿಗೋಪಾಳೆ ಮಾತ ನಾಡಿ, ’ನಿರ್ಗುಡಿ ಗ್ರಾಮಕ್ಕೆ ಪಶು ಆಸ್ಪತ್ರೆ ಮಂಜೂರುಗೊಳಿಸಲು ಪ್ರಯತ್ನಿಸಬೇಕು. ಇಲ್ಲಾಳ, ಯರಂಡಿ, ಬಂದೇನವಾಜವಾಡಿ, ಕೌಡಿಯಾಳ, ಸುಂಠಾಣ ರಸ್ತೆಗಳು ಹದಗೆಟ್ಟಿದ್ದು, ಶಾಸಕರು ಡಾಂಬರೀಕರಣಕ್ಕೆ ಅನುದಾನ ನೀಡಬೇಕು. ಪ್ರತಿ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು. ಸಮುದಾಯ ಭವನ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು' ಎಂದರು.
ಹಿರಿಯ ಮುಖಂಡ ಹರಿಶ್ಚಂದ್ರ ಪಾಟೀಲ, ಮದನ ಪಾಟೀಲ, ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಣಿಕ ಸೂರ್ಯವಂಶಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಆಶಾಬಾಯಿ ಕಾರಬಾರಿ, ಶಕುಂತಲಾ ನಾಗಪ್ಪ, ಅಶೋಕ ಖೇಲ್ಜೆ, ಪಿಡಿಒಗಣೇಶ ಖನಕೂರೆ, ದಿಲೀಪ ಸೂರ್ಯವಂಶಿ, ವಿಠಲರೆಡ್ಡಿ ಪಾಟೀಲ, ಬಾಲಾಜಿ ಚಂಡಕಾಪುರೆ, ಅಣ್ಣಾರಾವ್ ಮಜಗೆ, ಜಯದ್ರತ್ ಮಾಡ್ಜೆ, ಬಾಲಾಜಿ, ವೇದಪ್ರಕಾಶ ಮಾಡ್ಜೆ, ಶಿವಾಜಿ ಜಾಧವ, ದಯಾನಂದರಾವ್, ಪಂಢರಿನಾಥ ಜಾಧವ, ಗೌತಮ ಜ್ಯಾಂತೆ, ಮಾರುತಿ ಮೇತ್ರೆ, ಪ್ರಹ್ಲಾದ್ ಫುಲೆಬನೆ. ದಿಲೀಪ ದೇಸಾಯಿ, ಶರಣಪ್ಪ ಜಮಾದಾರ ಸಂಗೀತ ಪ್ರಸ್ತುತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.