ADVERTISEMENT

ಕರಕ್ಯಾಳ: ಗ್ರಾ.ಪಂ ಚುನಾವಣೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 13:31 IST
Last Updated 19 ಮಾರ್ಚ್ 2021, 13:31 IST
ಔರಾದ್ ತಾಲ್ಲೂಕಿನ ಕರಕ್ಯಾಳ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದರು
ಔರಾದ್ ತಾಲ್ಲೂಕಿನ ಕರಕ್ಯಾಳ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದರು   

ಕರಕ್ಯಾಳ (ಔರಾದ್): ಮಾ. 29 ರಂದು ಎಕಂಬಾ ಗ್ರಾಮ ಪಂಚಾಯಿತಿಯ ಕರಕ್ಯಾಳ ಗ್ರಾಮದ ಸದಸ್ಯ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ.

‘ಕರಕ್ಯಾಳ ಗ್ರಾಮದ ನಾಲ್ಕು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಮಾ.19 (ಶುಕ್ರವಾರ) ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಒಬ್ಬರೂ ನಾಮಪತ್ರ ಸಲ್ಲಿಸಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಎರಡನೇ ಬಾರಿ ಚುನಾವಣೆ ಮುಂದೂಡಬೇಕಾಗಿದೆ’ ಎಂದು ಚುನಾವಣಾ ಅಧಿಕಾರಿ ರಾಜಕುಮಾರ ಬಿರಾದಾರ ತಿಳಿಸಿದ್ದಾರೆ.

ಕರಕ್ಯಾಳ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯಿತಿಯನ್ನಾಗಿ ರಚನೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಹೀಗಾಗಿ ಆಯೋಗ ಮತ್ತೆ ಚುನಾವಣೆ ಘೋಷಣೆ ಮಾಡಿದೆ. ಗ್ರಾಮಸ್ಥರು ಈ ಬಾರಿಯೂ ಮತದಾನ ಮಾಡುವುದಿಲ್ಲ ಎಂದು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ADVERTISEMENT

ಕರಕ್ಯಾಳ ಮೊದಲು ಬೆಳಕುಣಿ (ಭು) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ತಾಲ್ಲೂಕು ವಿಭಜನೆಯ ನಂತರ ಎಕಂಬಾ ಗ್ರಾಮ ಪಂಚಾಯಿತಿಗೆ ಸೇರಿಸಲಾಗಿದೆ. ಇದು ತುಂಬಾ ಅವೈಜ್ಞಾನಿಕ. ಹೀಗಾಗಿ ಅತಿ ದೊಡ್ಡ ಗ್ರಾಮವಾಗಿರುವ ಕರಕ್ಯಾಳವನ್ನು ಪ್ರತ್ಯೇಕ ಗ್ರಾಮ ಪಂಚಾಯಿತಿ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂಬುದು ಬೇಡಿಕೆ.

‘ನಾವು ಡಿಸೆಂಬರ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡಿದರೂ ಯಾವೊಬ್ಬ ಅಧಿಕಾರಿಯೂ ನಮ್ಮ ಸಮಸ್ಯೆ ಕೇಳಲು ಬಂದಿಲ್ಲ’ ಎಂದು ಗ್ರಾಮದ ಸಿದ್ರಾಮ ಹಲಬರ್ಗೆ, ರಾಜೇಂದ್ರಕುಮಾರ ದೇಶಮುಖ, ಶಿವಲಿಂಗಯ್ಯ ಸ್ವಾಮಿ ಹಾಗೂ ದತ್ತಾತ್ರಿ ಪಾಟೀಲ ಮತ್ತಿತರರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.