ಔರಾದ್: ತಾಲ್ಲೂಕಿನ ಎಕಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕ್ಯಾಳ ಗ್ರಾಮದ ನಾಲ್ಕು ಸದಸ್ಯರ ಸ್ಥಾನಕ್ಕೆ ಮೇ 25ರಂದು ನಡೆಯುವ ಉಪ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.
2020ರ ಡಿಸೆಂಬರ್ನಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಂತರ ಕರಕ್ಯಾಳ ಗ್ರಾಮಸ್ಥರು 9ನೇ ಬಾರಿ ಚುನಾವಣೆ ಬಹಿಷ್ಕರಿಸಿದರೂ ಅವರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಚುನಾವಣೆ ನಡೆಯದೇ ಈ ಊರಿನಿಂದ ಪ್ರತಿನಿಧಿಸುವ ಸದಸ್ಯರು ಇಲ್ಲ. 25ರಂದು ನಡೆಬೇಕಿದ್ದ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಖಾಲಿ ಇರುವ ನಾಲ್ಕು ಸ್ಥಾನಕ್ಕೆ ಒಬ್ಬರು ನಾಮಪತ್ರ ಸಲ್ಲಿಸದೆ ತಾವು ಚುನಾವಣೆಯಿಂದ ದೂರ ಉಳಿಯುವುದಾಗಿ ಗ್ರಾಮದ ಮುಖಂಡರು ಚುನಾವಣಾಧಿಕಾರಿ ಹಾಗೂ ಪಿಡಿಒಗೆ ಮನವಿಪತ್ರ ಸಲ್ಲಿಸಿದರು.
ಕರಕ್ಯಾಳ ಗ್ರಾಮ ಪಂಚಾಯಿತಿ ಕೇಂದ್ರವಾಗಿ ಘೋಷಣೆ ಮಾಡುವಂತೆ ನಾವು ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಕಳೆದ ಐದು ವರ್ಷಗಳಲ್ಲಿ ನಡೆದ ಎಲ್ಲ ಉಪ ಚುನಾವಣೆ ಬಹಿಷ್ಕರಿಸಿದ್ದೇವೆ. ಆದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಸಿದ್ರಾಮ ಹಲಬರ್ಗೆ, ರಾಜೇಂದ್ರ ದೇಶಮುಖ, ರಮೇಶ ಬಾಲೂರೆ, ರಬ್ಬಾನಿ ಅಸಮಾಧಾನ ಹೊರ ಹಾಕಿದ್ದಾರೆ. ನಮ್ಮ ಗ್ರಾಮ ಪಂಚಾಯಿತಿ ಪ್ರತ್ಯೇಕ ಗ್ರಾಮ ಪಂಚಾಯಿತಿ ಕೇಂದ್ರವಾಗಲು ಎಲ್ಲ ಅರ್ಹತೆ ಇದ್ದು, ಸರ್ಕಾರ ನಮಗೆ ನಮ್ಮ ಹಕ್ಕಿನಿಂದ ವಂಚಿಸುತ್ತಿದೆ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.