ADVERTISEMENT

ಗುರು ಶಿಷ್ಯರ ಸಂಬಂಧ ಶ್ರೇಷ್ಠವಾದದ್ದು: ಶಿವಕುಮಾರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 4:57 IST
Last Updated 7 ಏಪ್ರಿಲ್ 2022, 4:57 IST
ಖಟಕಚಿಂಚೋಳಿ ಸಮೀಪದ ಚಳಕಾಪುರ ಗ್ರಾಮದ ಬ್ರಹ್ಮವಿದ್ಯಾಶ್ರಮದಲ್ಲಿ ಸಿದ್ಧಾರೂಢರ ಜಾತ್ರಾ ಮಹೋತ್ಸವವನ್ನು ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು
ಖಟಕಚಿಂಚೋಳಿ ಸಮೀಪದ ಚಳಕಾಪುರ ಗ್ರಾಮದ ಬ್ರಹ್ಮವಿದ್ಯಾಶ್ರಮದಲ್ಲಿ ಸಿದ್ಧಾರೂಢರ ಜಾತ್ರಾ ಮಹೋತ್ಸವವನ್ನು ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು   

ಖಟಕಚಿಂಚೋಳಿ: ‘ಜಗತ್ತಿನಲ್ಲಿ ಗುರು ಶಿಷ್ಯರ ಸಂಬಂಧ ಅತ್ಯಂತ ಶ್ರೇಷ್ಠವಾದದ್ದು’ ಎಂದು ಬೀದರ್ ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಚಳಕಾಪುರ ಗ್ರಾಮದ ಬ್ರಹ್ಮವಿದ್ಯಾಶ್ರಮದಲ್ಲಿ ಸಿದ್ಧಾರೂಢರ 186ನೇಯ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶಿಷ್ಯರ ಮಾನಸಿಕ ಗುಣಮಟ್ಟಕ್ಕೆ ಅನುಗುಣವಾಗಿ ಗುರುಗಳು ಬೋಧಿಸಬೇಕಾಗುತ್ತದೆ. ಶಿಷ್ಯರಲ್ಲಿ ಮೂರು ಪ್ರಕಾರದವರಿರುತ್ತಾರೆ. ಅಧಮ, ಮಧ್ಯಮ ಮತ್ತು ಉತ್ತಮ ಶಿಷ್ಯರು. ಮಹಾಭಾರತದಲ್ಲಿ ಶ್ರೀ ಕೃಷ್ಣನು ದಿವ್ಯ ದರ್ಶನ ಮಾಡಿಸುತ್ತಿರುವಾಗ ಕೇವಲ ಜ್ಞಾನವನ್ನು ನಂಬಿದಾತ ಅರ್ಜುನನಿದ್ದ, ಇದ್ದದ್ದನ್ನು ಇದ್ದಂಗೆ ಹೇಳುತ್ತಿರುವಾತ ಸಂಜಯನಿದ್ದ, ಅಪಾರ್ಥ ಮಾಡಿಕೊಳ್ಳುವಾತ ಧೃತರಾಷ್ಟ್ರನಿದ್ದ. ಇವರಲ್ಲಿ ಧೃತರಾಷ್ಟ್ರನನ್ನು ಅಧಮ ಗುಂಪಿಗೆ ಸೇರಿಸಲಾಗಿದೆ. ಸಂಜಯನನ್ನು ಮಧ್ಯಮ ಗುಂಪಿಗೆ ಹಾಗೂ ಅರ್ಜುನನನ್ನು ಉತ್ತಮ ಶಿಷ್ಯನ ಗುಂಪಿಗೆ ಸೇರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ನಮ್ಮಲ್ಲಿಯೂ ಈ ಮೂರು ಪ್ರಕಾರದ ಶಿಷ್ಯರಿರುತ್ತಾರೆ. ಅವರವರ ಜ್ಞಾನ ಮಟ್ಟಕ್ಕೆ ತಕ್ಕಂತೆ ಗುರುಗಳು ಬೋಧನೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಸೊಲ್ಲಾಪುರದ ಜಡಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ,‘ಅಧಿಕಾರಕ್ಕೆ ಮೂವರು ಶಿಷ್ಯರು ಅರ್ಹರಾಗಿರುತ್ತಾರೆ. ಗುರುಗಳು ಮೂವರಿಗೂ ದೀಕ್ಷೆ ಕೊಟ್ಟು ಬೋಧನೆ ಮಾಡಬೇಕಾಗುವುದು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಕ್ಷ್ಮೀದೇವಿ ತಾಯಿ, ಶಂಕರಾನಂದ ಸ್ವಾಮೀಜಿ, ದಯಾನಂದ ಸ್ವಾಮೀಜಿ, ಚಿಕ್ಕಮಠ ರೇವಣಸಿದ್ದ ಸ್ವಾಮೀಜಿ, ಚನ್ನಬಸವ ಪಟ್ಟದ್ದೇವರು, ಮಾತೋಶ್ರಿ ಜ್ಞಾನೇಶ್ವರಿ, ಸುಶಾಂತಾ, ಆನಂದಮತಿ, ಮಾತೋಶ್ರೀ ಸಿದ್ದೇಶ್ವರಿ, ಮಾತೋಶ್ರೀ ಅಮೃತಾನಂದಮಯಿ, ಸದ್ರುಪಾನಂದ ಸ್ವಾಮೀಜಿ ಇದ್ದರು.

ಗಣೇಶಾನಂದ ಮಹಾರಾಜ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.