ಬೀದರ್: ತಾಲ್ಲೂಕಿನ ಜನವಾಡದಲ್ಲಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿದೆ.
ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಜನವಾಡ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಭೋವಿ (ವಡ್ಡರ) ಜನಾಂಗದ ಸುಮಾರು 30 ಕುಟುಂಬಗಳು ಇವೆ. ಗ್ರಾಮದ ಹಿಂದುಳಿದ ವರ್ಗಕ್ಕೆ ಸೇರಿದ ಭೋಯಿ, ರಜಪೂತ್, ಕಹಾರ್ ಜನಾಂಗದವರು ಸುಳ್ಳು ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಕಬಳಿಸುತ್ತಿದ್ದಾರೆ ಎಂದು ಆರೋಪಿಸಿದರು.
2004 ರಲ್ಲಿ ಬೀದರ್ ಮೀಸಲು ಲೋಕಸಭೆ ಆಗಿದ್ದಾಗ ಈಶ್ವರಚಂದ್ರ ವಿದ್ಯಾಸಾಗರ ಅವರು ನಾಮಪತ್ರ ಸಲ್ಲಿಸಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಸಿದಾಗ, ತನಿಖೆ ನಡೆಸಿ ಅವರ ನಾಮಪತ್ರ ತಿರಸ್ಕೃತಗೊಳಿಸಲಾಗಿತ್ತು ಎಂದು ಹೇಳಿದರು.
ಬೀದರ್ ನಗರದ ಕೆಲ ಓಣಿಗಳಲ್ಲೂ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಯ ಭೋವಿ ವಡ್ಡರ ಜಾತಿ ಪದವನ್ನು ದುರುಪಯೋಗ ಪಡೆಸಿಕೊಂಡು ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರು, ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಿವರಾಜ ತಡಪಳ್ಳಿ, ಅಧ್ಯಕ್ಷ ರಾಜಕುಮಾರ ಮೂಲಭಾರತಿ, ಕಾರ್ಯಾಧ್ಯಕ್ಷ ಅಭಿ ಕಾಳೆ, ಉಪಾಧ್ಯಕ್ಷರಾದ ಉಮೇಶಕುಮಾರ ಸ್ವಾರಳ್ಳಿಕರ್, ರವಿಕುಮಾರ ವಾಘಮಾರೆ, ಪ್ರಮುಖರಾದ ಬಾಬುರಾವ್ ಪಾಸ್ವಾನ್, ಶಿವಕುಮಾರ ನೀಲಕಟ್ಟಿ, ಶ್ರೀಪತರಾವ್ ದೀನೆ, ರಾಜಕುಮಾರ ಗುನ್ನಳ್ಳಿ, ಸಂತೋಷ ಏಣಕೂರ, ರವಿಕುಮಾರ ವಾಘಮಾರೆ, ಸೂರ್ಯಕಾಂತ ಕಮಠಾಣ, ಮಲ್ಲಿಕಾರ್ಜುನ ಚಿಟ್ಟಾ, ವಿನೋದಕುಮಾರ ಗುಪ್ತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.