ADVERTISEMENT

ರೈತನಿಗೆ ₹ 50 ಸಾವಿರ ಪರಿಹಾರ ನೀಡುವಂತೆ ಜೆಸ್ಕಾಂಗೆ ಆದೇಶಿಸಿದ ಗ್ರಾಹಕ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 15:47 IST
Last Updated 4 ಜನವರಿ 2026, 15:47 IST
   

ಔರಾದ್ (ಬೀದರ್‌ ಜಿಲ್ಲೆ): ಕೃಷಿ ಪಂಪಸೆಟ್‌ಗೆ ಸರ್ಮಪಕ ವಿದ್ಯುತ್ ಪೂರೈಕೆಯಾಗದೆ ಬೆಳೆ ಹಾನಿ ಅನುಭವಿಸಿದ ರೈತರೊಬ್ಬರಿಗೆ ಪರಿಹಾರ ನೀಡುವಂತೆ ಬೀದರ್ ಜಿಲ್ಲಾ ಗ್ರಾಹಕರ ನ್ಯಾಯಾಲಯ ಜನವರಿ 2ರಂದು ಮಹತ್ವದ ತೀರ್ಪು ನೀಡಿದೆ.

ಔರಾದ್ ಪಟ್ಟಣದ ರೈತ ಸಂಜುಕುಮಾರ ವೀರಪ್ಪ ಉಚ್ಚೆ ಇವರಿಗೆ ₹ 50 ಸಾವಿರ ಬೆಳೆ ನಷ್ಟ ಪರಿಹಾರ ಹಾಗೂ ₹ 5 ಸಾವಿರ ದಾವೆ ವೆಚ್ಚ ಪಾವತಿಸಲು ಜೆಸ್ಕಾಂಗೆ ಆದೇಶ ಮಾಡಿದೆ. ಅಷ್ಟೇ ಅಲ್ಲದೆ 45 ದಿನಗಳ ಒಳಗೆ ಈ ಆದೇಶ ಪಾಲಿಸುವುದರ ಜತೆಗೆ ರೈತನ ಪಂಪಸೆಟ್‌ಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಬೇಕಾಗದ ಎಲ್ಲ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.

‘ನನಗೆ ಔರಾದ್ ಪಟ್ಟಣದ ಸರ್ವೇ ನಂಬರ್ 23ರಲ್ಲಿ 2.34 ಎಕರೆ ಜಮೀನು ಇದೆ. ಸಾಲ ಮಾಡಿ ಬಾವಿ ಕೊರೆದು 5ಎಚ್‌ಪಿ ಮೋಟಾರ್ ಕೂಡಿಸಿದ್ದೇನೆ. ಆದರೆ ವಿದ್ಯುತ್ ವೊಲ್ಟೇಜ್ ಸರಿಯಾಗಿ ಸಿಗದೆ ಬೆಳೆ ಹಾನಿಯಾಗಿದೆ. ಇದರಿಂದಾಗಿ ತುಂಬಾ ನೊಂದಿರುವ ನಾನು ಒಂದು ವರ್ಷದ ಹಿಂದೆ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದೆ. ಮೊನ್ನೆ ಬಂದ ತೀರ್ಪು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ರೈತ ಸಂಜುಕುಮಾರ ವೀರಪ್ಪ ಉಚ್ಚೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಗ್ರಾಹಕರ ನ್ಯಾಯಾಲಯ ನೀಡಿರುವ ಈ ತೀರ್ಪು ಗ್ರಾಮೀಣ ರೈತರಿಗೆ ನ್ಯಾಯ ಸಿಗುವಂತೆ ಮಾಡಿದೆ. ಜೆಸ್ಕಾಂ ಅಧಿಕಾರಿಗಳು ಈಗಲಾದರೂ ಎಚ್ಚತ್ತುಕೊಂಡು ರೈತರ ಪಂಪಸೆಟ್‌ಗಳಿಗೆ ಸರ್ಮಪಕ ವಿದ್ಯುತ್ ಪೂರೈಸಬೇಕು ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ಹೇಳಿದ್ದಾರೆ.

ರೈತ ಸಂಜುಕುಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.