ಬಸವಕಲ್ಯಾಣ: ‘ಅನಗತ್ಯ ವಿಷಯದ ಕಡೆ ಹೆಚ್ಚಿನ ಲಕ್ಷ್ಯ ನೀಡಿ ಅಧ್ಯಯನಕ್ಕೆ ಕಡಿಮೆ ಸಮಯ ನೀಡಿದರೆ ಭವಿಷ್ಯ ಹಾಳಾಗುತ್ತದೆ’ ಎಂದು ಡಿಡಿಪಿಯು ಚಂದ್ರಕಾಂತ ಶಹಾಬಾದಕರ್ ಹೇಳಿದರು.
ನಗರದ ಡಾ.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮೊಬೈಲ್ ಬಳಕೆ ಜ್ಞಾನ ಹೆಚ್ಚಿಸುವುದಕ್ಕೆ ಹಾಗೂ ಇತರ ಉತ್ತಮ ಕಾರ್ಯಕ್ಕೆ ಆಗಬೇಕು. ಆದರೆ, ಬೆಳಿಗ್ಗೆಯಿಂದ ಸಂಜೆಯವರೆಗೆ ಅದನ್ನೇ ಕೈಯಲ್ಲಿ ಹಿಡಿದುಕೊಂಡು ನೋಡುತ್ತ ಕುಳಿತರೆ ಅಧ್ಯಯನ ಹೇಗಾಗುತ್ತದೆ. ಕಾಲೇಜು ಆವರಣದಲ್ಲಂತು ಮೊಬೈಲ್ ಬಳಕೆ ಬೇಡವೇ ಬೇಡ. ಇಂದು ಅತ್ಯಧಿಕ ಅಂಕ ಪಡೆದವರಿಗೆ ಮಾತ್ರ ಎಲ್ಲೆಡೆ ಅವಕಾಶವಿದೆ. ಇಂಥದರಲ್ಲಿ ಓದದೆ ಕಾಲಹರಣ ಮಾಡುವುದು ಸರಿಯಲ್ಲ. ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಉನ್ನತಮಟ್ಟಕ್ಕೆ ಬೆಳೆಯುವ ಕನಸು ಕಾಣಬೇಕು. ಅದರಂತೆ ಪ್ರಾಮಾಣಿಕವಾಗಿ ಪ್ರಯತ್ನವೂ ಮಾಡಬೇಕು’ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಜೈಶೇನಪ್ರಸಾದ ಮಾತನಾಡಿ,‘ಪ್ರತಿಯೊಬ್ಬ ವಿದ್ಯಾರ್ಥಿಯು ಸನ್ಮಾರ್ಗ, ಸನ್ನಡತೆ ರೂಢಿಸಿಕೊಳ್ಳಬೇಕು. ಸತ್ಯ, ಅಹಿಂಸೆ ಮಾರ್ಗದಲ್ಲಿ ಸಾಗಿ ಶ್ರೇಷ್ಠ ನಾಗರಿಕ ಎನಿಸಿಕೊಳ್ಳಬೇಕು’ ಎಂದರು.
ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಅಕ್ಕಣ್ಣ ಹಾಗೂ ಇತರರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಲಕ್ಷ್ಮಣ ಕಾರಾಮುಂಗೆ, ನಾಗೇಶ ಡೊಂಗರೆ, ಶ್ರೀಧರ ಚಲವಾದಿ, ಶೇಖ ಎಸ್.ಕೆ, ವಿಜಯಕುಮಾರ ಪಂಡಿತ, ಶಿವಶರಣಪ್ಪ ದೇಸಾಯಿ, ಸಂತೋಷ ಶಿಂಧೆ, ಹಣಮಂತ, ನಿತ್ಯಾನಂದ ಗಾಯಕವಾಡ ಹಾಗೂ ದೀಪಕ ಮೋರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.