
ಔರಾದ್: ತಾಲ್ಲೂಕಿನ ಬೋಂತಿ ಘಮಸುಬಾಯಿ ತಾಂಡಾದಲ್ಲಿ ಬುಧವಾರ ದೇವಿ ಜಾತ್ರೆ ಅಂಗವಾಗಿ ಜಾನಪದ ಸಂಭ್ರಮ ನಡೆಯಿತು. ಗ್ರಾಮೀಣ ಸಂಸ್ಕೃತಿ, ಪರಂಪರೆ ಹಾಗೂ ಕಲಾ ವೈಭವ ಅನಾವರಣಗೊಂಡಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಕಲಾ ತಂಡಗಳು ತಮ್ಮ ವೈಶಿಷ್ಟ್ಯಪೂರ್ಣ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನಸೆಳೆದವು. ಜಾತ್ರೆಯ ಪ್ರಮುಖ ಭಾಗವಾದ ಮೆರವಣಿಗೆಯಲ್ಲಿ ಕೋಲಾಟ, ತಮಟೆ ವಾದನ, ಬಂಜಾರಾ ಸಂಗೀತ, ಬಂಜಾರಾ ನೃತ್ಯ, ಕೀರ್ತನೆ, ಭಜನೆ, ಜಾನಪದ ಸಂಗೀತ, ಗೀಗಿಪದ, ಶಿವ ಭಜನೆ ಸೇರಿದಂತೆ ಅನೇಕ ಜಾನಪದ ಕಲಾ ರೂಪಗಳು ಅದ್ದೂರಿಯಾಗಿ ಪ್ರದರ್ಶನಗೊಂಡವು.
ಉದ್ಘಾಟನೆ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರಭು ಚವಾಣ್, ‘ಮಾತಾ ಜಗದಂಬಾ ಜಾತ್ರೆಯಲ್ಲಿ ಎಲ್ಲರನ್ನು ಒಗ್ಗೂಡಿಸುವುದರ ಜೊತೆಗೆ ಜಾನಪದ ಕಲೆ ಉಳಿಸಿ ಬೆಳೆಸುವ ಕೆಲಸ ನಡೆದಿದೆ. ಇಂದು ಗ್ರಾಮೀಣ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸಲಾಗುತ್ತಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಾಸಾಶನ ಪಡೆಯುವ ಕಲಾವಿದರು ಔರಾದನಲ್ಲಿದ್ದಾರೆ’ ಎಂದರು.
ಭಾಲ್ಕಿ ಮಠದ ಗುರುಬಸವ ಪಟ್ಟದೇವರು ಮಾತನಾಡಿ, ‘ಶಾಸಕ ಪ್ರಭು ಚವಾಣ್ ಅವರು ಧರ್ಮ, ಕಲೆ ಮತ್ತು ಸಂಸ್ಕೃತಿಯ ಆರಾಧಕರಾಗಿದ್ದು, ಈ ದಿಶೆಯಲ್ಲಿ ಪ್ರತಿ ವರ್ಷ ಜಾತ್ರೆಯ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿದರು. ಬಂಜಾರಾ ಸಮಾಜದ ಧರ್ಮಗುರು, ಮಹಾರಾಷ್ಟ್ರದ ವಿಪ ಸದಸ್ಯ ಬಾಬುಸಿಂಗ್ ಮಹಾರಾಜ ಸಾನ್ನಿಧ್ಯ ವಹಿಸಿದರು.
ಶಂಭುಲಿಂಗ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಮುಖಂಡ ಮಾರುತಿ ಚವಾಣ್, ಸುರೇಶ ಭೋಸ್ಲೆ, ಕಿರಣ ಪಾಟೀಲ, ಶಿವಾಜಿರಾವ ಪಾಟೀಲ, ಪ್ರತೀಕ ಚವಾಣ್, ರಾಮಶೆಟ್ಟಿ ಪನ್ನಾಳೆ, ರಾಜಶೇಖರ ನಾಗಮೂರ್ತಿ, ಬಸವರಾಜ ಪವಾರ, ಖಂಡೋಬಾ ಕಂಗಟೆ, ಪ್ರಕಾಶ ಮೇತ್ರೆ, ಮಲ್ಲಪ್ಪ ನೇಳಗೆ, ಶಕುಂತಲಾ ಮುತ್ತಂಗೆ, ಗೀತಾ ಗೌಡಾ, ಪ್ರಕಾಶ ಜೀರ್ಗೆ, ಉದಯ ಸೋಲಾಪೂರೆ, ರವೀಂದ್ರ ರೆಡ್ಡಿ, ರಮೇಶ ಗೌಡಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.