ಬೀದರ್: ಇನ್ನೂ ಸ್ವಾಧೀನಪಡಿಸಿಕೊಳ್ಳದ ಕಾರಂಜಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ ಕಬ್ಬು ಬೆಳೆದ ಹೆಚ್ಚುವರಿ ಜಮೀನಿನಲ್ಲಿ ನಿಂತಿರುವ ನೀರು ಖಾಲಿ ಮಾಡಿಸಲು ಒತ್ತಾಯಿಸಿ ಜ. 25 ರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೂಚಕನಳ್ಳಿ ತಿಳಿಸಿದ್ದಾರೆ.
ಸುಮಾರು ಎರಡು ಸಾವಿರ ಎಕರೆಯಷ್ಟು ಇರುವ ಹೆಚ್ಚುವರಿ ಜಮೀನಿನಲ್ಲಿ ರೈತರು ಬೆಳೆದಿರುವ ಕಬ್ಬು ಕಟಾವಿಗೆ ಬಂದಿದೆ. ಜಲಾಶಯದ ನಿಂತ ನೀರಿನಿಂದ ಈಗಾಗಲೇ ಅರ್ಧ ಬೆಳೆ ಹಾಳಾಗಿದೆ. ಇನ್ನುಳಿದ ಬೆಳೆಯೂ ಕೈಗೆ ಬಾರದಂತಾಗಿದೆ. ನೀರು ಖಾಲಿಯಾಗದೆ ಕಬ್ಬು ಕಟಾವು ಮಾಡಲಾಗದು. ಕಾರ್ಖಾನೆಗಳು ಕೂಡ 15 ದಿನಗಳಲ್ಲಿ ಪ್ರಸಕ್ತ ಸಾಲಿನ ಹಂಗಾಮು ಮುಕ್ತಾಯಗೊಳಿಸುವ ಸಾಧ್ಯತೆ ಇರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದಾರೆ.
ತಕ್ಷಣ ಕೆನಾಲ್ ಇಲ್ಲವೇ ನದಿಗೆ ನೀರು ಬಿಟ್ಟರೆ ಕಬ್ಬು ಕಾರ್ಖಾನೆಗೆ ಸಾಗಿಸಲು ಅನುಕೂಲವಾಗಲಿದೆ. ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆಡಳಿತವನ್ನು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.