ADVERTISEMENT

ಬೀದರ್: ಕಸಾಪ ಮಾಜಿ ಅಧ್ಯಕ್ಷ ಕಾಶೀನಾಥ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:09 IST
Last Updated 5 ಮಾರ್ಚ್ 2021, 2:09 IST
ಕಾಶೀನಾಥ ವಿಶ್ವಕರ್ಮ
ಕಾಶೀನಾಥ ವಿಶ್ವಕರ್ಮ   

ಬೀದರ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕಾಶೀನಾಥ ವಿಶ್ವಕರ್ಮ (87) ನಗರದಲ್ಲಿ ಗುರುವಾರ ನಿಧನರಾದರು.

ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ನಂತರ ಸಾಮಾಜಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಬುದ್ಧಿಜೀವಿ ಎಂದೇ ಗುರುತಿಸಿಕೊಂಡಿ ದ್ದರು. ಸಮಾಜಪರ ಚಿಂತಕರಾಗಿದ್ದರು.

ಕೊಡುಗೈ ದಾನಿಯಾಗಿದ್ದ ಅವರು, ಕುಟುಂಬದ ಮೂಲಗಳ ಪ್ರಕಾರ ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಕಟ್ಟಡ ನಿರ್ಮಾಣಕ್ಕೆ ₹1 ಕೋಟಿ ದೇಣಿಗೆ ಕೊಟ್ಟಿದ್ದರು. ತೆಲಂಗಾಣದ ಶಬರಿಮಾತಾ, ತಾಡವಾಯಿ ಕ್ಷೇತ್ರಕ್ಕೂ ₹1 ಕೋಟಿಗೂ ಅಧಿಕ ದೇಣಿಗೆ ಕೊಟ್ಟು ಹೃದಯ ಶ್ರೀಮಂತಿಕೆ ಮೆರೆದಿದ್ದರು.

ADVERTISEMENT

ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷರಾಗಿ ಮೌನೇಶ್ವರ ಮಂದಿರ ನಿರ್ಮಾ ಣಕ್ಕೆ ಮಾರ್ಗದರ್ಶನ ಮಾಡಿದ್ದರು. ಮಂದಿರಕ್ಕೆ ಮೌನೇಶ್ವರರ ಮೂರ್ತಿಯನ್ನು ದೇಣಿಗೆ ರೂಪದಲ್ಲಿ ಕೊಟ್ಟಿದ್ದರು.

‘ಕಾಶೀನಾಥ ವಿಶ್ವಕರ್ಮ ಅವರು 1981ರ ಆಗಸ್ಟ್ 15 ರಿಂದ 1982 ರ ಜುಲೈ 11 ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮೂರನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸ ಪರಿಣಾಮಕಾರಿಯಾಗಿ ಮಾಡಿದ್ದರು. ಕನ್ನಡ ಪರ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ
ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಗೂ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ತಿಳಿಸಿದರು.

ಕಾಶೀನಾಥ ವಿಶ್ವಕರ್ಮ ಅವರಿಗೆ ಮೂವರು ಪುತ್ರಿಯರು ಇದ್ದಾರೆ. ಶುಕ್ರವಾರ (ಮಾ.5) ಮಧ್ಯಾಹ್ನ 12.45ಕ್ಕೆ ನಗರದ ನರಸಿಂಹ ಝರಣಿ ಸಮೀಪದ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.