
ಹುಮನಾಬಾದ್: ಕ್ಷೇತ್ರದ ಜನರಿಗೆ ಉಚಿತ ಆರೋಗ್ಯ ಸೇವೆ ದೊರಕಿಸಿಕೊಡುವ ಉದ್ದೇಶದಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಹೊರವಲಯದ ಎಚ್. ಕೆ. ಡಿ. ಇ.ಟಿಯ ದಂತ ಮತ್ತು ಫಾರ್ಮಸಿ ಕಾಲೇಜಿನ ದಿ. ಬಸವರಾಜ್ ಪಾಟೀಲ ಫೌಂಡೇಶನ್, ಹೈದರಾಬಾದ್ ಕರ್ನಾಟಕ ಶಿಕ್ಷಣ, ಬಸವೇಶ್ವರ ಆಸ್ಪತ್ರೆ ಕಲಬುರಗಿ, ಎನ್.ಜಿ. ಎನ್. ಫೌಂಡೇಶನ್ ಕಲಬುರಗಿ ಹಾಗೂ ರೋಟರಿ ಕ್ಲಬ್ ಹುಮನಾಬಾದ್ ವತಿಯಿಂದ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವೈದ್ಯಕೀಯ ತಪಾಸಣೆಯೊಂದಿಗೆ ಉಚಿತ ಸರ್ಜರಿ ಮತ್ತು ಔಷಧಿ ನೀಡಲಾಗುತ್ತಿದೆ. ಶಿಬಿರದ ಲಾಭವು ಹಳ್ಳಿಗಾಡಿನ ಜನತೆಗೆ ಸಿಗಲಿ ಎಂಬ ಕಾರಣಕ್ಕೆ ಇಲ್ಲಿ ಆಯೋಜಿಸಲಾಗಿದೆ. ತಾಲ್ಲೂಕಿನ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಇದರಿಂದ ಅನುಕೂಲವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ . ಚಂದ್ರಶೇಖರ ಪಾಟೀಲ ಮಾತನಾಡಿ, ‘ಹುಮನಾಬಾದ್ ತಾಲ್ಲೂಕಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬಡ ರೋಗಿಗಳ ಅನುಕೂಲಕ್ಕಾಗಿ ಕಣ್ಣಿನ ಶಸ್ತ್ರಚಿಕಿತ್ಸೆ, ನರ ರೋಗ, ಕೀಲು ಮತ್ತು ಮೋಳೆ, ಸ್ತ್ರೀ ರೋಗ, ಚರ್ಮ, ಕೆಮ್ಮು , ದಮ್ಮು, ಅಸ್ತಮಾ, ಮಾನಸಿಕ ರೋಗ, ಹೃದಯ ರೋಗ, ಮೂತ್ರ ಪಿಂಡ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ತಜ್ಞ ವೈದ್ಯರಿಂದ ತಪಾಸಣೆ ಮಾಡಲಾಗಿದೆ’ ಎಂದು ಹೇಳಿದರು.
ಎನ್. ಜಿ.ಎನ್. ಫೌಂಡೇಶನ್ ಕಾರ್ಯದರ್ಶಿ ಡಾ. ಸಂತೋಷ್ ಕುಮಾರ್ ನಾಗಲಪೂರೆ ಮಾತನಾಡಿ, ಶಿಬಿರದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೇಂದ್ರ ತೆರೆದು ತಪಾಸಣೆ ನಡೆಸಲಾಯಿತು. 3 ಸಾವಿರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದ್ದರು. ಸುಮಾರು 42 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜಾ ಭೀಮಳ್ಳಿ, ಡಾ.ಕೈಲಾಸ್ ಪಾಟೀಲ, ಡಾ. ಕಿರಣ್ ದೇಶಮುಖ್, ಡಾ. ರಜನೀಶ್ ವಾಲಿ, ಡಾ. ಗುರುಲಿಂಗಪ್ಪ ಪಾಟೀಲ, ಡಾ. ವಿಜಯಕುಮಾರ್ ಕಪ್ಪಿಕಿರೆ, ಸುನೀಲ ದೇಶಮುಖ್, ನದೀಂ , ವೀರಣ್ಣ ಪಾಟೀಲ, ಪ್ರೇಮಾ ರಾಜಶೇಖರ ಪಾಟೀಲ, ವಿದ್ಯಾ ಭೀಮರಾವ್ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ರುದ್ರಂ ಪಾಟೀಲ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.